ಮಂಗಳೂರು,ಸೆ.29 : ದೀಪಾವಳಿ ಪ್ರಯುಕ್ತ ಜಿಲ್ಲೆಯ ವಿವಿದೆಡೆ ಪಟಾಕಿ ಸ್ಟಾಲುಗಳನ್ನು ತೆರೆಯಲು ಆಸಕ್ತರು ಅಕ್ಟೋಬರ್ 10 ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ತಿಳಿಸಿದ್ದಾರೆ.
ಅವರು ಇಂದು ಈ ಸಂಬಂಧ ತಮ್ಮ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾರ್ವಜನಿಕ ಜನದಟ್ಟಣೆ ಪ್ರದೇಶಗಳಲ್ಲಿ ಮತ್ತು ರಸ್ತೆ ಬದಿಗಳಲ್ಲಿ ಪಟಾಕಿ ಅಂಗಡಿ ತೆರೆಯಲು ಅವಕಾಶ ಇಲ್ಲ.ಇದಲ್ಲದೆ ಮಾರುಕಟ್ಟೆ,ವೃತ್ತಗಳ ಸಮೀಪ,ಶಾಲೆ,ಬಸ್ಸ್ಟಾಂಡ್ ಪಕ್ಕದಲ್ಲೂ ಅನುಮತಿ ನೀಡಲಾಗುವುದಿಲ್ಲ.ಕನಿಷ್ಠ 1 ಎಕರೆ ಖಾಲಿ ಜಾಗ ಇರುವ ಪ್ರದೇಶದಲ್ಲಿ ಮಾತ್ರ ಪಟಾಕಿ ಸ್ಟಾಲುಗಳನ್ನು ತೆರೆಯಲು ಅನುಮತಿ ನೀಡಲಾಗುವುದು ಎಂದು ಅವರು ಹೇಳಿದರು.
ಮಂಗಳೂರು ತಾಲೂಕಿನಲ್ಲಿ ಕದ್ರಿಪಾರ್ಕ್ ಎದುರು,ಬೈಕಂಪಾಡಿ ಎಪಿಎಂಸಿ ಆವರಣ ,ಬಂಗ್ರಕೂಳೂರು ಮೈದಾನ, ಕಾವೂರು ಮೈದಾನ, ಪಂಪ್ವೆಲ್ ಹೊಸ ಬಸ್ ಸ್ಟಾಂಡ್, ಉರ್ವಾಸ್ಟೋರ್ ,ಸುರತ್ಕಲ್, ಮೂಲ್ಕಿ, ಮೂಡಬಿದ್ರೆ ಮೈದಾನದಲ್ಲಿ,ಪಟಾಕಿ ಅಂಗಡಿ ತೆರೆಯಲು ಅವಕಾಶ ಮಾಡಿಕೊಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು,ಡಿಸಿಪಿ ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.