ಪ್ರಮುಖವಾದ ಸಾಂಬಾರ ಪದಾರ್ಥಗಳಲ್ಲಿ ಶುಂಠಿ ಕೂಡ ಒಂದು. ಒಣಗಿದ ಹಾಗೂ ಹಸಿಶುಂಠಿಗಳೆರಡನ್ನೂ ಸಾಂಬಾರ ಪದಾರ್ಥವಾಗಿ ಬಳಸುತ್ತಾರೆ. ನಮ್ಮ ದೇಹದಲ್ಲಿ ಪಚನಶಕ್ತಿಯನ್ನು ಹೆಚ್ಚಿಸುವ ಇದನ್ನು ಆಯುರ್ವೇದ ಔಷಧಿಗಳ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಸುತ್ತಾರೆ.ಆಯುರ್ವೇದ ವೈದ್ಯಶಾಸ್ತ್ರದಲ್ಲಿ ಶುಂಠಿಯನ್ನು ನಾಗರ, ವಿಶ್ವೌಷಧ ವಿಶ್ವಭೇಷಜ, ಮಹೌಷಧ ಮುಂತಾದ ಹೆಸರುಗಳಿಂದ ಕರೆಯುತ್ತಾರೆ.
ಸಂಸ್ಕøತದ ಈ ಹೆಸರುಗಳೇ ಸೂಚಿಸುವಂತೆ ಇದು ಒಂದು ಅಪೂರ್ವ ಔಷಧ ದ್ರವ್ಯ. ಕಟು(ಖಾರ) ರಸವನ್ನು ಹೊಂದಿರುವ ಇದು ಜೀರ್ಣರಸದೊಂದಿಗೆ ಸೇರಿ ಪಚನವಾದಾಗ ಮಧುರ (ಸಿಹಿ)ಭಾವವನ್ನು ಪಡೆಯುವುದರಿಂದ ಇದು ಒಂದು ಶಕ್ತಿವರ್ಧಕವಾಗಿದೆ.
ಗುಣದಲ್ಲಿ ಸ್ನಿಗ್ಧ ಮತ್ತು ಉಷ್ಣ ವೀರ್ಯವುಳ್ಳದ್ದಾಗಿದ್ದು ಕಫ ಮತ್ತು ವಾತ ದೋಷಗಳನ್ನು ನಾಶ ಮಾಡುತ್ತದೆ. ಶ್ವಾಸಕೋಶ, ಅರುಚಿ, ಪಾಂಡು (ರಕ್ತಹೀನತೆ), ಅತಿಸಾರ, ಜ್ವರ, ಕೆಮ್ಮು ಮುಂತಾದ ರೋಗಿಗಳಿಗೆ ಉಪಯೋಗಿಸಲ್ಪಡುವ ಇದು ಒಂದು ಶ್ರೇಷ್ಠ ದೀಪನ ಮತ್ತು ಪಚನ ಔಷಧವಾಗಿದೆ. ಇದಲ್ಲದೆ ಅಮವಾತ (ಕೀಲುನೋವು)ಗ್ರಹಣಿ, ಗುಲ್ಮ, ಹೃದ್ರೋಗ, ಅತಿಸಾರ ಮುಂತಾದ ಅನೇಕ ರೋಗಗಳಿಗೆ ಶುಂಠಿ ಒಂದು ಉತ್ತಮ ಔಷಧಿ. ಹಸಿ ಶುಂಠಿಯನ್ನು ಅದ್ರಕ ಎಂದು ಕರೆಯುತ್ತಾರೆ. ಅಡುಗೆ ಮತ್ತು ಔಷಧಿಗಳಲ್ಲಿ ಒಣಶುಂಠಿ ಹಾಗೂ ಹಸಿ ಶುಂಠಿಗಳೆರಡೂ ಉಪಯೋಗಕ್ಕೆ ಬರುತ್ತವೆ.
ನಮ್ಮೆಲ್ಲರ ಅಡುಗೆಮನೆಯ ನಿತ್ಯಸಂಗಾತಿ ಶುಂಠಿಯನ್ನು ಅಡುಗೆಗೆ ಮಾತ್ರ ಸೀಮಿತವಾದ ಸಾಂಬಾರ ಪದಾರ್ಥವೆಂದು ತಿಳಿದುಕೊಂಡಿದ್ದರೆ ಅದಕ್ಕಿಂತ ದೊಡ್ಡ ತಪ್ಪು ಇನ್ನೊಂದಿಲ್ಲ. ಏಕೆಂದರೆ ಶುಂಠಿ ಅಜೀರ್ಣ, ಶೀತ, ಕೆಮ್ಮು ಮೊದಲಾದ ತೊಂದರೆಗಳಿಗೆ ಹೇಗೆ ಉಪಯುಕ್ತವಾದ ಔಷಧಿಯೋ ಅಂತೆಯೇ ತ್ವಚೆಗೂ ಒಂದು ಉತ್ತಮವಾದ ಔಷಧಿಯಾಗಿದೆ. ಅಷ್ಟೇ ಅಲ್ಲದೆ ದುಬಾರಿ ಪ್ರಸಾಧನಗಳು ನೀಡುವ ಪರಿಣಾಮಕ್ಕಿಂತಲೂ ಉತ್ತಮವಾದ ಪರಿಣಾಮವನ್ನು ಅಡುಗೆಮನೆಯಲ್ಲಿ ಸದಾ ಇರುವ ಈ ಪುಟ್ಟ ಶುಂಠಿಯಿಂದ ಪಡೆಯಬಹುದು.
ಚಳಿಗಾಲದಲ್ಲಿ ಒಂದು ಲೋಟ ಬಿಸಿ ಬಿಸಿ ಶುಂಠಿ ಚಹಾ ನೀಡುವ ಆರಾಮವನ್ನು ಬೇರೆ ಯಾವುದೂ ನೀಡಲು ಸಾಧ್ಯವಿಲ್ಲ. ವಿಟಮಿನ್ ಸಿ, ಮೆಗ್ನೇಶಿಯಂ ಮತ್ತು ಇತರ ಖನಿಜಗಳನ್ನು ಹೊಂದಿರುವ ಶುಂಠಿ ಆರೋಗ್ಯಕ್ಕೆ ಅತ್ಯಂತ ಪ್ರಯೊಜನಕಾರಿಯಾಗಿದೆ. ಶುಂಠಿ ಟೀ ನಿಮ್ಮನ್ನು ಪೆÇೀಷಿಸುವುದು ಮಾತ್ರವಲ್ಲ, ಜೊತೆಗೆ ಚಳಿಗಾಲಕ್ಕೆ ಸಂಬಂಧಿತ ಅನೇಕ ಆರೊಗ್ಯ ಸಮಸ್ಯೆಗಳಿಗೆ ಪರಿಹಾರ ನಿಡುತ್ತದೆ. ಆದ್ದರಿಂದ ಶುಂಠಿ ಚಹಾ ಔಷಧಿ ಗುಣಗಳನ್ನು ಹೊಂದಿದ್ದು ಚಿಕಿತ್ಸೆ ರೂಪದಲ್ಲಿ ಬಳಸಲಾಗುತ್ತದೆ. ಅಡುಗೆಮನೆಯ ವೈದ್ಯನೆಂದೇ ಕರೆಸಿಕೊಳ್ಳುವ ಶುಂಠಿ. ಉತ್ತಮ ಆರೋಗ್ಯಕ್ಕೆ ಅದೆಷ್ಟು ಸಹಕಾರಿ ಎಂಬುದಕ್ಕೆ ಕೆಲವು ಉದಾಹರಣೆಗಳು ಇಲ್ಲಿವೆ ನೋಡಿ.
ಶುಂಠಿಯನ್ನು ತೇಯ್ದು ಬರುವ ಗಂಧವನ್ನು ಹಣೆಗೆ ಹಚ್ಚುವುದರಿಂದ ಶೀತ, ಶೀತದಿಂದ ಬರುವ ತಲೆನೋವು ಕಡಿಮೆಯಾಗುತ್ತದೆ.
ಒಂದು ಚಮಚ ಒಣಶುಂಠಿ ಪುಡಿಗೆ ಒಂದು ಲೋಟ ನೀರು ಹಾಕಿ ಅರ್ಧಕ್ಕಿಳಿಸಿ, ಶೋಧಿಸಿ ಸ್ವಲ್ಪ ಬೆಲ್ಲ ಅಥವಾ ಜೇನುತುಪ್ಪ ಸೇರಿಸಿ ಬಿಸಿಬಿಸಿಯಾಗಿ ಕುಡಿದರೆ ನೆಗಡಿ, ಶೀತ, ಕೆಮ್ಮು, ಗಂಟಲು ನೋವು ಕಡಿಮೆಯಾಗುತ್ತದೆ.
ಒಂದು ಚಮಚ ಜೇನು, 2 ಚಮಚ ತುಳಸಿ ರಸ, ಅರ್ಧ ಚಮಚ ಶುಂಠಿರಸ ಮಿಶ್ರ ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಕಫ ಕಡಿಮೆಯಾಗುತ್ತದೆ.
ಚೂರು ಹಸಿ ಶುಂಠಿಯನ್ನು ಕಲ್ಲುಸಕ್ಕರೆ ಅಥವಾ ಬೆಲ್ಲದೊಂದಿಗೆ ತಿಂದರೆ ಹೊಟ್ಟೆಯುಬ್ಬರ ಕಡಿಮೆಯಾಗಿ ಹಸಿವುಂಟಾಗುತ್ತದೆ, ನಾಲಿಗೆ ರುಚಿ ಹೆಚ್ಚಾಗುತ್ತದೆ.
1 ತುಂಡು ಒಣಶುಂಠಿ ಮತ್ತು 1 ಚಮಚ ಜೀರಿಗೆ ಪುಡಿಮಾಡಿ 4 ಲೋಟ ನೀರಿಗೆ ಹಾಕಿ ಕುದಿಸಿ ಶೋಧಿಸಬೇಕು, ಈ ಕಷಾಯವನ್ನು ಆಗಾಗ ಒಂದೆರಡು ಚಮಚ ಸೇವಿಸುವುದರಿಂದ ಹೊಟ್ಟೆಯುಬ್ಬರ, ಅಜೀರ್ಣ ನಿವಾರಣೆಯಾಗುತ್ತದೆ.
ಶುಂಠಿ ಮತ್ತು ಬೆಲ್ಲದ ಮಿಶ್ರಣ ರೋಗ ನಿರೋಧಕ, ವಾಯುನಾಶಕ, ಜೀರ್ಣಕಾರಿ. ಜೊತೆಗೆ ತುಪ್ಪ ಸೇರಿಸಿ ಕೊಡುವುದರಿಂದ ಬಾಣಂತಿಯರಿಗೆ ಬಹಳ ಒಳ್ಳೆಯದು.ಒಂದು ಲೋಟ ಹಾಲು, ಒಂದು ಲೋಟ ನೀರಿಗೆ ಅರ್ಧ ಚಮಚ ಶುಂಠಿ ಚೂರ್ಣವನ್ನು ಹಾಕಿ, ಹಾಲು ಮಾತ್ರ ಉಳಿಯುವಂತೆ ಕುದಿಸಿ ಕಾಲು ಚಮಚ ಅರಿಶಿನ ಪುಡಿ, ಬೆಲ್ಲ ಸೇರಿಸಿ ಕುಡಿದರೆ ನೆಗಡಿ, ಗಂಟಲು ನೋವು, ಕೆಮ್ಮು ಕಡಿಮೆಯಾಗುತ್ತದೆ.
ಅರ್ಧ ಟೀ ಚಮಚ ಶುಂಠಿರಸ, 1 ಚಮಚ ನಿಂಬೆರಸ, ಪುದಿನರಸ, ಜೇನುತುಪ್ಪ ಸೇರಿಸಿ ಮೂರು ಭಾಗ ಮಾಡಿ ದಿನಕ್ಕೆ ಮೂರು ಬಾರಿ ಸೇವಿಸಿದರೆ ಅಜೀರ್ಣ, ಕೆಮ್ಮು ನಿವಾರಣೆಯಾಗುತ್ತದೆ.
ಒಂದು ತುಂಡು ಹಸಿಶುಂಠಿಯನ್ನು 1 ಕಪ್ ನೀರಿನಲ್ಲಿ 15 ನಿಮಿಷ ಕುದಿಸಿ, ಸಕ್ಕರೆ ಹಾಕಿ ದಿನಕ್ಕೆ ಮೂರು ಬಾರಿ ಆಹಾರದ ನಂತರ ಸೇವಿಸಿದರೆ ಕಷ್ಟಕರ ಋತುಸ್ರಾವ ನಿವಾರಣೆಯಾಗುತ್ತದೆ.
ಒಂದು ತುಂಡು ಶುಂಠಿ, 1 ಲವಂಗ ಚೂರು ಉಪ್ಪಿನೊಂದಿಗೆ ಬಾಯಲ್ಲಿಟ್ಟು ರಸ ಸೇವಿಸುತ್ತಿದ್ದರೆ ತಲೆನೋವು ಶಮನವಾಗುತ್ತದೆ.
ಒಣಶುಂಠಿ ಚೂರ್ಣವನ್ನು ಬೆಲ್ಲದೊಂದಿಗೆ ಸೇವಿಸಿದರೆ ಅಜೀರ್ಣದಿಂದ ಉಂಟಾದ ಬೇಧಿಗೆ ಉತ್ತಮ ಪರಿಣಾಮ ನೀಡುತ್ತದೆ.
ಶುಂಠಿ ಬಳಸುವ ಮುನ್ನ ಎಚ್ಚರ
ಇತ್ತೀಚೆಗೆ ಶುಂಠಿ ರಾಸಾಯನಿಕಗಳಿಂದ ವಿಷಕಾರಿಯಾಗುತ್ತಿರುವ ಅಂಶ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಸಿಗುವ ರೇಡಿಮೇಡ್ ಶುಂಠಿ ಖರೀದಿಗೂ ಮುನ್ನ ಎಚ್ಚರವಹಿಸುವುದು ಅನಿವಾರ್ಯವಾಗಿದೆ.
ಶುಂಠಿ ಬೆಳೆಗಾರರು ಅತ್ಯಧಿಕ ಲಾಭದ ಆಸೆಗೆ ಬಿದ್ದು ಆಹಾರ ಪದಾರ್ಥಗಳನ್ನು ಕಲುಷಿತಗೊಳಿಸುತ್ತಿದ್ದಾರೆ. ಭೂಮಿಯಲ್ಲಿ ಬಿತ್ತಿದ ಶುಂಠಿ ಮೊಳಕೆಯೊಡೆದು ಬೆಳೆಯಾಗಿ ಬಂದ ಮೇಲೂ ಅದಕ್ಕೆ ವಿಷಕಾರಿ ಕೆಮಿಕಲ್ಸ್ ಸೇರ್ಪಡೆಯಾಗುತ್ತಿರುವುದೇ ಶುಂಠಿ ವಿಷಕಾರಿಯಾಗಲು ಕಾರಣವಾಗಿದೆ ಎನ್ನಲಾಗುತ್ತಿದೆ.
ಬಿತ್ತನೆ ಮಾಡುವಾಗ ಭೂಮಿಗೆ ಸುಣ್ಣ ಮತ್ತು ಕೆಲವು ವಿಷಕಾರಕ ರಾಸಾಯನಿಕಗಳನ್ನು ಬಳಸಲಾಗುತ್ತದೆ. ನಂತ್ರ ಶುಂಠಿ ಗಿಡ ಬೆಳೆಯುತ್ತಿದ್ದಂತೆ ಕೊಳೆ ರೋಗ ಸೇರಿದಂತೆ ಇತರೆ ರೋಗಗಳು ಬಾರದಂತೆ ಮಾನೋಕ್ರೊಟಫಾಸ್, ಎಂಡೋಸಲ್ಫಾನ್ ಸೇರಿದಂತೆ ಅತಿ ಹೆಚ್ಚು ವಿಷ ಅಂಶ ಹೊಂದಿರುವ ಕೀಟನಾಶಕಗಳನ್ನು ಯಥೇಚ್ಛವಾಗಿ ಬಳಸುವ ಮೂಲಕ ಶುಂಠಿ ವಿಷಕಾರಿಯಾಗುತ್ತಿದೆ.