ಮಂಗಳೂರು: ಎತ್ತಿನಹೊಳೆ ಯೋಜನೆಯ ಪ್ರದೇಶಕ್ಕೆ ಡಿ.28ರಂದು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಪ್ರಾದೇಶಿಕ ಉನ್ನತಾಧಿಕಾರ ಸಮಿತಿಯು ಮೊದಲನೇ ಹಂತದ ಅನುಮತಿ ನೀಡಿದೆ. ಇದು ಸ್ಥಳೀಯ ಪರಿಸರವಾದಿಗಳಿಂದ ತೀವ್ರ ಆಕ್ರೋಶಕ್ಕೂ ಕಾರಣವಾಗಿದೆ.
ಎತ್ತಿನಹೊಳೆ ಯೋಜನೆಯ ಕಾಮಗಾರಿ ನಡೆಯುವ 2 ಕಡೆಗಳಲ್ಲಿ ಮಾತ್ರ ಜೀವ ವೈವಿಧ್ಯತೆಯು ನಾಶವಾಗಲಿದ್ದು, ಬೇರೆ ಕಡೆಗಳಲ್ಲಿ ಪರಿಸರಕ್ಕೆ ಹಾನಿಯಾಗುವ ಗಂಭೀರ ಲಕ್ಷಣಗಳಿಲ್ಲ. ಅಲ್ಪ ಪ್ರಮಾಣದಲ್ಲಿ ಅರಣ್ಯ ನಾಶವಾದರೂ ಕೆಲವೇ ವರ್ಷಗಳಲ್ಲಿ ಪರಿಸರವು ಮೊದಲಿನ ಸ್ಥಿತಿಗೆ ಬರಲಿದೆ ಎಂದು ಸಮಿತಿಯು ವರದಿಯಲ್ಲಿ ತಿಳಿಸಿದೆ.
ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಪರಿಸರ ಹೋರಾಟಗಾರ ಎಂ.ಜಿ. ಹೆಗಡೆ, ಯೋಜನೆಯನ್ನು ಆರಂಭಿಸುವಾಗ 6 ತಿಂಗಳ ಕಾಲ 24 ಟಿಎಂಸಿ ನೀರನ್ನು ಕೊಂಡೊಯ್ಯುವುದಾಗಿ ಹೇಳಲಾಗಿತ್ತು. ಆದರೆ ಪ್ರಾದೇಶಿಕ ಉನ್ನತಾಧಿಕಾರ ಸಮಿತಿಯು ಈಗ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಕೇವಲ ನಾಲ್ಕು ತಿಂಗಳು ನೀರು ಹರಿಸುವುದಾಗಿ ಹೇಳಿದೆ. ಅಲ್ಲದೆ, ಯೋಜನೆ ವ್ಯಾಪ್ತಿಯಲ್ಲೇ ಬರುವ ಆನೆ ಕಾರಿಡಾರ್, ವನ್ಯಜೀವಿಗಳ ನಾಶ, ಅರಣ್ಯ ನಾಶ, ಜೀವ ವೈವಿಧ್ಯಗಳ ಕುರಿತು ಯಾವುದೇ ಪ್ರಸ್ತಾಪವನ್ನು ಮಾಡಿಲ್ಲ. ಅಂತಹ ಪ್ರಸ್ತಾಪ ಮಾಡಿದ್ದರೆ ಯೋಜನೆಗೆ ಪ್ರಾಥಮಿಕ ಹಂತದ ಅನುಮತಿ ನೀಡಲು ಸಾಧ್ಯ ವಾಗುತ್ತಿರಲಿಲ್ಲ ಎಂದು ಆರೋಪಿಸಿದ್ದಾರೆ.