ಕರ್ನಾಟಕ

ನಾಲ್ಕು ತಿಂಗಳಲ್ಲಿ ತ್ಯಾಜ್ಯ ಸಮಸ್ಯೆ ಮುಕ್ತ ರಾಜಧಾನಿ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ

Pinterest LinkedIn Tumblr

siddu1

ಬೆಂಗಳೂರು: ಮುಂದಿನ ನಾಲ್ಕು ತಿಂಗಳಲ್ಲಿ ಬೆಂಗಳೂರಿನ ಸಮಸ್ತ ತ್ಯಾಜ್ಯ ಸಂಸ್ಕರಣೆ ಮಾಡುವ ಸಾಮರ್ಥ್ಯವನ್ನು ಬಿಬಿಎಂಪಿ ಗಳಿಸಲಿದ್ದು, ಆ ಬಳಿಕ ಶೇ.100ರಷ್ಟು ಕಸ ಸಂಸ್ಕರಣೆ ಮಾಡುವ ದೇಶದ ಮೊದಲ ಮಹಾನಗರವಾಗಿ ಬೆಂಗಳೂರು ಹೊರಹೊಮ್ಮಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರಿನ ಕಸ ವಿಲೇವಾರಿ, ಘನತ್ಯಾಜ್ಯ ಸಂಸ್ಕರಣೆ ಕುರಿತು ಗೃಹ ಕಚೇರಿ ಕೃಷ್ಣಾದಲ್ಲಿ ನಗರ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಮೇಯರ್ ಶಾಂತಕುಮಾರಿ, ಸರಕಾರದ ಮುಖ್ಯಕಾರ್ಯದರ್ಶಿ ಕೌಶಿಕ್ ಮುಖರ್ಜಿ, ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮೀನಾರಾಯಣ ಮೊದಲಾದವರ ಜತೆಗೆ ಶನಿವಾರ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು.

”ಮಂಡೂರಿನಲ್ಲಿ ಪ್ರತಿನಿತ್ಯ 1300 ಟನ್ ಕಸ ಹಾಕುವುದನ್ನು ಡಿಸೆಂಬರ್ ಮೊದಲ ವಾರದಿಂದ ನಿಲ್ಲಿಸುವುದಾಗಿ ವಾಗ್ದಾನ ಮಾಡಿದ್ದೆ. 10 ದಿನಗಳ ಮೊದಲೇ ಮಂಡೂರಿನಲ್ಲಿ ಕಸ ವಿಲೇವಾರಿ ಮಾಡುವುದನ್ನು ನಿಲ್ಲಿಸಿದ್ದೇವೆ. ಬೆಂಗಳೂರಿನಲ್ಲಿ ಪ್ರತಿನಿತ್ಯ 4000 ರಿಂದ 4500 ಟನ್ ಕಸ ಉತ್ತತ್ತಿಯಾಗುತ್ತಿದೆ. ಹಿಂದಿನ ಬಿಜೆಪಿ ಸರಕಾರದವರು ಕಸ ಸಮಸ್ಯೆ ನಿವಾರಿಸುತ್ತೇವೆ ಎಂದು ಹೇಳಿಕೊಂಡು ಬಂದರು. ಆದರೆ, ಯಾವುದನ್ನೂ ಮಾಡಲಿಲ್ಲ. ಕಸದ ಹೊರೆಯನ್ನು ನಮ್ಮ ಸರಕಾರದ ಮೇಲೆ ಹಾಕಿ ಹೋದರು. ನಮ್ಮ ಸರಕಾರ ಬಂದ ಮೇಲೆ ಭರವಸೆ ನೀಡಿದಂತೆ ನಡೆದುಕೊಂಡಿದ್ದೇವೆ. ಪ್ರತಿನಿತ್ಯ 3000 ಟನ್ ಕಸವನ್ನು ಸಂಸ್ಕರಿಸಲಾಗುತ್ತಿದೆ. ಬಿಂಗಿಪುರದಲ್ಲಿ 750 ಟನ್ ಹಾಗೂ ಲಕ್ಷ್ಮೀಪುರದಲ್ಲಿ 250 ಟನ್ ಕಸವನ್ನು ಹಾಕಲಾಗುತ್ತಿದೆ. ಉಳಿದೆಲ್ಲ ಕಡೆ ಘನತ್ಯಾಜ್ಯ ಸುರಿಯುತ್ತಿಲ್ಲ. ಬಿಂಗಿಪುರ ಹಾಗೂ ಲಕ್ಷ್ಮೀಪುರಗಳಲ್ಲಿ ಸಂಸ್ಕರಣಾ ಘಟಕ ಸ್ಥಾಪಿಸಲು ಭೂಮಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. 3-4 ತಿಂಗಳಲ್ಲಿ ಬೆಂಗಳೂರಿನಲ್ಲಿ ಉತ್ಪತ್ತಿಯಾಗುವ ಎಲ್ಲಾ ಕಸವನ್ನು ಸಂಸ್ಕರಣೆ ಮಾಡುವ ಘಟಕವನ್ನು ಸ್ಥಾಪಿಸಲಾಗುತ್ತದೆ. ಆ ಬಳಿಕ ಕಸ ವಿಲೇವಾರಿ ಸಮಸ್ಯೆ ಇಲ್ಲದ ಮೊದಲ ಮಹಾನಗರವಾಗಿ ಬೆಂಗಳೂರು ರೂಪುಗೊಳ್ಳಲಿದೆ,” ಎಂದರು.

ಕಸದಿಂದ ಕರೆಂಟ್: ”ಕಸದಿಂದ ಕರೆಂಟ್ ಉತ್ಪಾದಿಸುವ ಯೋಜನೆಯನ್ನು ಬಿಬಿಎಂಪಿಯು ಖಾಸಗಿ ಸಹಭಾಗಿತ್ವ ಅನುಷ್ಠಾನಗೊಳಿಸಲಿದೆ. ಮುಂದಿನ 15 ವರ್ಷಗಳಲ್ಲಿ ಪ್ರತಿನಿತ್ಯ ಉತ್ಪಾದನೆಯಾಗಬಹುದಾದ ತ್ಯಾಜ್ಯವನ್ನು ಸಂಸ್ಕರಿಸುವ ದೂರದೃಷ್ಟಿಯಲ್ಲಿ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ,” ಎಂದು ಸಿದ್ದರಾಮಯ್ಯ ವಿವರಿಸಿದರು.

”ಸ್ವಿಸ್ ಮೂಲದ ಸತಾರಾಂ 1000 ಟನ್, ಆರ್ಗ್ಯಾನಿಕ್ಸ್ ವೇಸ್ಟ್ ಇಂಡಿಯಾ 600 ಟನ್ ಹಾಗೂ ಎಸ್ಸೆಲ್ ಕಂಪನಿ 600 ಟನ್ ಕಸ ಬಳಸಿ ವಿದ್ಯುತ್ ಉತ್ಪಾದಿಸುವ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಮುಂದೆ ಬಂದಿವೆ. ಮಾಗಡಿ ತಾಲೂಕಿನ ಗೊರೂರಿನಲ್ಲಿ ಸತಾರಾಂ ಕಂಪನಿಯ ಸ್ಥಾವರ ಸ್ಥಾಪನೆಯಾಗಲಿದೆ. ಸ್ಥಾವರಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದು, ಮಾತುಕತೆಯ ಮೂಲಕ ಅದನ್ನು ಬಗೆಹರಿಸಲಾಗುವುದು. ಕಂಪನಿಯುವರು ಪವರ್ ಪಾಯಿಂಟ್ ಪ್ರೆಸೆಂಟೇಶನ್ ಮಾಡಿದ್ದು, ಒಂದೇ ಒಂದು ತುಣುಕು ತ್ಯಾಜ್ಯವೂ ಅಲ್ಲಿಂದ ಹೊರಬೀಳುವುದಿಲ್ಲ. ಅಷ್ಟು ಸುರಕ್ಷಿತ, ವಾಸನೆ ರಹಿತ ಘಟಕವನ್ನು ಸ್ಥಾಪಿಸುವುದಾಗಿ ಕಂಪನಿ ಹೇಳಿದೆ,” ಎಂದು ತಿಳಿಸಿದರು.

ರಸ್ತೆ ವಿಸ್ತರಣೆಗೆ ಚಾಲನೆ: ”ಅರಮನೆ ಮೈದಾನದ ಸುತ್ತಲಿನ ಎರಡು ರಸ್ತೆಗಳ ವಿಸ್ತರಣೆ ಕಾಮಗಾರಿಯನ್ನು ವಾರದಲ್ಲಿ ಕೈಗೆತ್ತಿಕೊಳ್ಳಲಾಗುವುದು,” ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ರಾಜವಂಶಸ್ಥರು ಮತ್ತು ಸರಕಾರದ ಮಧ್ಯೆ ಇದ್ದ ವ್ಯಾಜ್ಯದ ಕುರಿತು ಸುಪ್ರೀಂಕೋರ್ಟ್ ತೀರ್ಪು ನೀಡಿದ್ದು, ಟಿಡಿಆರ್ ನೀಡಿ 16 ಎಕರೆ ಅರಮನೆ ಮೈದಾನವನ್ನು ರಸ್ತೆಗೆ ಬಳಸಿಕೊಳ್ಳಲು ಅವಕಾಶ ನೀಡಿದೆ. ಹಿಂದೆಯೇ ಯೋಜನೆ ರೂಪುಗೊಂಡಿದ್ದು, ಕಾಮಗಾರಿ ಆರಂಭವಾಗಿತ್ತು. ಕೋರ್ಟ್‌ನಲ್ಲಿ ಇದ್ದುದರಿಂದ ನನೆಗುದಿಗೆ ಬಿದ್ದಿತ್ತು. ಯೋಜನೆಯನ್ನು ಮರುಪರಿಶೀಲಿಸಿ ವಾರಾಂತ್ಯದಲ್ಲಿ ಕಾಮಗಾರಿ ಆರಂಭಿಸಲಾಗುವುದು,” ಎಂದು ಹೇಳಿದರು.

ಕಂಟೋನ್ಮೆಂಟ್‌ನಿಂದ ಮೇಕ್ರಿ ಸರ್ಕಲ್, ಬಿಡಿಎ ಜಂಕ್ಷನ್‌ನಿಂದ ಮೇಕ್ರಿ ಸರ್ಕಲ್‌ವರೆಗೆ ರಸ್ತೆ ವಿಸ್ತರಣೆಗೊಳ್ಳಲಿದೆ. ಬಿಡಿಎ ಎದುರಿನ ಮ್ಯಾಜಿಕ್ ಬಾಕ್ಸ್‌ನ್ನು ಉಳಿಸಿಕೊಳ್ಳಬೇಕೇ ಬೇಡವೇ ಎಂಬುದನ್ನು ನಂತರ ತೀರ್ಮಾನಿಸಲಾಗುವುದು. ರಸ್ತೆ ವಿಸ್ತರಣೆ ಮುಗಿದ ಬಳಿಕ ಮೇಲುರಸ್ತೆ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ,” ಎಂದು ಮುಖ್ಯಮಂತ್ರಿ ಹೇಳಿದರು.

”ರಸ್ತೆ ವಿಸ್ತರಣೆಗೆ ಅಗತ್ಯವಿದ್ದರೆ ಮರಗಳನ್ನು ಕಡಿಯಲಾಗುವುದು. ಒಂದು ಮರ ಕಡಿಯುವ ಮೊದಲು 10 ಸಸಿಗಳನ್ನು ನೆಡುತ್ತೇವೆ. ಮರಗಳನ್ನು ಇಟ್ಟುಕೊಂಡು ರಸ್ತೆ ವಿಸ್ತರಣೆ ಮಾಡಲಾಗದು,” ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿಭಜನೆ ವರದಿ ಬಳಿಕ ಚುನಾವಣೆ ತೀರ್ಮಾನ ”ಬಿಬಿಎಂಪಿಯ ವಿಭಜನೆ ಕುರಿತು ವರದಿ ನೀಡಲು ರಚಿಸುವ ಸಮಿತಿ ವರದಿ ಬಳಿಕ ಚುನಾವಣೆ ಕುರಿತು ತೀರ್ಮಾನ ಕೈಗೊಳ್ಳಲಾಗುವುದು,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

”ಬಿಬಿಎಂಪಿ ವ್ಯಾಪ್ತಿ 800 ಕಿ.ಮೀ. ವಿಸ್ತೀರ್ಣ ಹೊಂದಿದೆ. ಆಡಳಿತಾತ್ಮಕ ದೃಷ್ಟಿಯಿಂದ ವಿಭಜನೆ ಮಾಡಬೇಕೆಂಬ ಅಭಿಪ್ರಾಯ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸಮಿತಿ ರಚಿಸಿದ್ದೇನೆ. ಸಮಿತಿ ವರದಿ ಆಧರಿಸಿ ಚುನಾವಣೆ ನಡೆಸುವ ನಿರ್ಣಯ ಕೈಗೊಳ್ಳುತ್ತೇವೆ,” ಎಂದರು.

ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸುವುದಿಲ್ಲವೇ ಎಂಬ ಸುದ್ದಿಗಾರರ ಪ್ರಶ್ನೆಗೆ ”ಪೂರ್ವ ಸಂಶಯ ನಿಮಗ್ಯಾಕೆ? ನಾನು ಹಾಗೆ ಹೇಳಿಲ್ಲ. ವರದಿ ಬರುವವರೆಗೆ ಅವಸರ ಏಕೆ? ನಾನು ಹೇಳದೆಯೇ ನೀವೇ ಊಹಿಸಿಕೊಂಡರೆ ಹೇಗೆ? ಹೇಗೋ ಏಪ್ರಿಲ್‌ವರೆಗೆ ಸಮಯ ಇದೆಯಲ್ಲವೇ,” ಎಂದು ಹೇಳಿದರು.

Write A Comment