ಚಿಕ್ಕಬಳ್ಳಾಪುರ: ಬಯಲುಸೀಮೆ ಜನರ ನೀರಾವರಿ ಕನಸು ಇದೀಗ ಮಬ್ಬಾಗುತ್ತಿದೆ. ನೀರಾವರಿ ತಜ್ಞ ಜಿ.ಎಸ್. ಪರಮಶಿವಯ್ಯ ವರದಿಯಾಧಾರಿತ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕಾಗಿ ಈ ಭಾಗದ ಜನ ಅನೇಕ ವರ್ಷಗಳಿಂದ ಹೋರಾಟ ನಡೆಸಿದ್ದರು. ರಾಜ್ಯ ಸರ್ಕಾರ ದಿಢೀರನೇ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ಪ್ರಸ್ತಾಪಿಸಿ 6 ತಿಂಗಳ ಹಿಂದೆ ಶಂಕುಸ್ಥಾಪನೆ ನೆರವೇರಿಸಿದಾಗ ಜನರಲ್ಲಿ ಹೊಸ ಆಶಾಕಿರಣ ಮೂಡಿತ್ತು.
ಪಶ್ಚಿಮಘಟ್ಟದಲ್ಲಿ ಹರಿದು ವ್ಯರ್ಥವಾಗಿ ಸಮುದ್ರಕ್ಕೆ ಸೇರುತ್ತಿರುವ ನೇತ್ರಾವತಿ ನದಿಯ ನೀರನ್ನು ಬಯಲುಸೀಮೆ ಪ್ರದೇಶಕ್ಕೆ ಹರಿಸಬೇಕೆಂದು ಒತ್ತಾಯಿಸಿ ಪಾದಯಾತ್ರೆ, ಧರಣಿ ನಡೆಸಿದಾಗ ರಾಜ್ಯ ಸರ್ಕಾರ, ‘ಎತ್ತಿನಹೊಳೆ ಮೊದಲು, ಶಾಶ್ವತ ನೀರಾವರಿ ಯೋಜನೆ ನಂತರ’ ಎಂಬರ್ಥದ ಭರವಸೆ ನೀಡಿತ್ತು.
ಆದರೆ ಪರಿಸರ ತಜ್ಞರು, ಕರಾವಳಿ– ಮಲೆನಾಡಿನ ಜನರು ಯೋಜನೆಗೆ ಆಕ್ಷೇಪಿಸುತ್ತಿರುವಾಗ ಸರ್ಕಾರ ನಿಲುವು ಬದಲಾಗದೇ ಎಂಬ ಪ್ರಶ್ನೆ ಬಯಲುಸೀಮೆ ಜನರಲ್ಲಿ ಮೂಡಿದೆ.
‘ಬಯಲು ಸೀಮೆ ಪ್ರದೇಶಕ್ಕೆ ನೀರು ಹರಿಸಲು ಇಷ್ಟವಿಲ್ಲದ ಪರಿಸರ ತಜ್ಞರು ಮತ್ತು ಜನರು ಅನಗತ್ಯ ವಿವಾದ ಸೃಷ್ಟಿಸುತ್ತಿದ್ದಾರೆ. ಯೋಜನೆ ಅನುಷ್ಠಾನಕ್ಕೆ ಅತ್ಯಾಧುನಿಕ ಮಾದರಿ ತಂತ್ರಜ್ಞಾನವಿದ್ದರೂ ಗೊಂದಲ ಮೂಡಿಸಲಾಗುತ್ತಿದೆ. ಇದರ ಬಗ್ಗೆ ರಾಜ್ಯ ಸರ್ಕಾರ ಸಹ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ’ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಬಯಲುಸೀಮೆ ಪ್ರದೇಶದ ಜನರ ವಿರೋಧದ ನಡುವೆಯೇ ತರಾತುರಿಯಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗುವ ಮುನ್ನ ಚಿಕ್ಕಬಳ್ಳಾಪುರದಲ್ಲಿ ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಿದ ಸರ್ಕಾರವು ಬಯಲುಸೀಮೆ ಪ್ರದೇಶಕ್ಕೆ ಎಷ್ಟು ಪ್ರಮಾಣ ನೀರು ಬೇಕು? ಎಷ್ಟು ಕೆರೆ ಭರ್ತಿಯಾಗಬೇಕು? ಎತ್ತಿನಹೊಳೆ ನೀರಿನ ಶೇಖರಣಾ ಪ್ರಮಾಣ ಎಷ್ಟಿದೆ ಮುಂತಾದ ವಿಷಯಗಳ ಬಗ್ಗೆ ಸಮರ್ಪಕ ಅಧ್ಯಯನವೇ ನಡೆಸಬೇಕಿತ್ತು’ ಎಂಬುದು ಅವರ ಅಭಿಪ್ರಾಯ.
‘ಪರಮಶಿವಯ್ಯ ವರದಿ ಆಧಾರಿತ ಶಾಶ್ವತ ನೀರಾವರಿ ಯೋಜನೆ ಕುರಿತು ಸ್ಪಷ್ಟ ನಿಲುವು ತಿಳಿಸದ ರಾಜ್ಯ ಸರ್ಕಾರ ಎತ್ತಿನಹೊಳೆ ಯೋಜನೆ ಮುಂದಿಟ್ಟು ಇನ್ನಷ್ಟು ಗೊಂದಲ ಮೂಡಿಸುತ್ತಿದೆ. ಎತ್ತಿನಹೊಳೆ ಯೋಜನೆಯಲ್ಲದೇ ಶರಾವತಿ ನೀರಾವರಿ ಯೋಜನೆ, ಮೇಕೆದಾಟು ಯೋಜನೆ, ಬೆಂಗಳೂರಿನಿಂದ ಕೊಳಚೆ ನೀರು ಶುದ್ಧಗೊಳಿಸಿ ಹರಿಸುವ ಯೋಜನೆ, ಕೆಜಿಎಫ್ ಚಿನ್ನದ ಗಣಿಯ ನೀರಿನ ಯೋಜನೆ ಹೀಗೆ ಹತ್ತು ಹಲವು ಯೋಜನೆಗಳನ್ನು ಪ್ರಸ್ತಾಪಿಸುತ್ತಿದೆ. ಯಾವುದೇ ನಿರ್ದಿಷ್ಟ ಯೋಜನೆ ಬಗ್ಗೆ ಬದ್ಧತೆ ತೋರುತ್ತಿಲ್ಲ’ ಎಂದು ಅವಿಭಜಿತ ಕೋಲಾರ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಜಿ.ವಿ.ಶ್ರೀರಾಮರೆಡ್ಡಿ ತಿಳಿಸಿದರು.
ಟ್ಯಾಂಕರ್ ನೀರು ಪೂರೈಕೆ
ನದಿನಾಲೆ, ಕೆರೆಕುಂಟೆಗಳು ಬರಿದಾಗಿ ಕೊಳವೆಬಾವಿಗಳನ್ನು ಆಶ್ರಯಿಸಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸದ್ಯಕ್ಕೆ 676 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. 275 ಗ್ರಾಮಗಳಿಗೆ ಟ್ಯಾಂಕರ್ನಿಂದ ನೀರು ಪೂರೈಸಲಾಗುತ್ತಿದೆ.
ನೀರಿಗಾಗಿ ಪಂಚಾಯತ್ ರಾಜ್ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳ ಎದುರು ಪ್ರತಿದಿನ ಪ್ರತಿಭಟನೆ ನಡೆಯುತ್ತಿದೆ. ‘ಅಂತರ್ಜಲದ ಪ್ರಮಾಣ ಕುಸಿಯತೊಡಗಿದ್ದು ಕೊಳವೆಬಾವಿಗಳು ಬರಿದಾಗತೊಡಗಿವೆ. 1500 ಅಡಿಗಳಷ್ಟು ಆಳದ ಕೊಳವೆಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ನಾವು ಬದುಕಲು ಕೃಷಿ ಚಟುವಟಿಕೆ ಕೈಗೊಳ್ಳುವುದು ಹೇಗೆ? ಎತ್ತಿನಹೊಳೆಯಿಂದ ಕುಡಿಯಲು ನೀರು ಬಂದರೆ ಸಾಕೇ? ಕೆರೆಕುಂಟೆ ತುಂಬುವುದು ಮತ್ತು ಅಂತರ್ಜಲ ಪ್ರಮಾಣ ವೃದ್ಧಿಯಾಗುವುದು ಬೇಡವೇ’ ಎಂದು ರೈತರು ಪ್ರಶ್ನಿಸುತ್ತಾರೆ.