ಬೆಂಗಳೂರು: ‘ಆಧುನಿಕತೆ ಶತ್ರುವಾಗಿ ಬಂದಿದ್ದರೆ ನಾವೆಲ್ಲ ಎದುರಿಸುತ್ತಿದ್ದೆವು. ಆಧುನಿಕತೆ ಉದ್ಧಾರಕನ ರೀತಿಯಲ್ಲಿ ಮಿತ್ರನಾಗಿ ಬಂತು. ಹಾಗಾಗಿ ನಾವೆಲ್ಲ ಮಾರು ಹೋದೆವು. ಅದೇ ರೀತಿ ಇಂಗ್ಲಿಷ್ ಸಹ ಬಂದಿದೆ’ ಎಂದು ಹಿರಿಯ ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ವಿಶ್ಲೇಷಿಸಿದರು.
‘ಅಂಕಿತ ಪುಸ್ತಕ’ ಪ್ರಕಾಶನದ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಹಿರಿಯ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಅವರ ‘ಅಡಗೂಲಜ್ಜಿ’ ಕಾದಂಬರಿ ಹಾಗೂ ‘ಕನ್ನಡಾಭಿಮಾನ’ ಕನ್ನಡ ಪರ ಚಿಂತನ ಕೃತಿ (ಮೂರನೇ ಮುದ್ರಣ) ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಹಳ್ಳಿಯ ತಾಯಿ ಸಹ ಮಗನಿಗೆ ಇಂಗ್ಲಿಷ್ ಶಿಕ್ಷಣ ನೀಡಬೇಕು ಎಂದು ಬಯಸುತ್ತಿದ್ದಾಳೆ. ಇಂಗ್ಲಿಷ್ ಭಾಷೆ ಅಂತಹ ಮೋಡಿ ಮಾಡಿದೆ. ಇಂಗ್ಲಿಷ್ ಭಾಷೆಯನ್ನು ವಿರೋಧಿಸುವ ಸಾಧ್ಯತೆಗಳು ಸಹ ಕಾಣುತ್ತಿಲ್ಲ’ ಎಂದರು.
‘ನಮ್ಮ ಬದುಕನ್ನು ತುಂಬಾ ಅಲ್ಲೋಲಕಲ್ಲೋಲ ಮಾಡುತ್ತಿರುವುದು ಸಮೂಹ ಮಾಧ್ಯಮಗಳು. ನಿತ್ಯ ನೂರಾರು ಚಾನೆಲ್ಗಳನ್ನು ನೋಡುತ್ತೇವೆ. ಯಾವುದರ ಬಗ್ಗೆಯೂ ಧ್ಯಾನಸ್ಥ ಮನಸ್ಥಿತಿ ಇಲ್ಲ. ಮಕ್ಕಳು ಮಾಧ್ಯಮಗಳ ದಾಸ್ಯಕ್ಕೆ ಒಳಗಾಗುತ್ತಿದ್ದಾರೆ. ಸಮಾಜ ರೂಪಿಸುವವರು ನಾವೇ ಎಂಬ ಅಹಂಕಾರ ಮಾಧ್ಯಮಗಳಿಗೆ ಬಂದಿದೆ’ ಎಂದರು.
‘ಇಡೀ ಸಮಾಜವನ್ನು ಒಳಗೊಳ್ಳುವ ಶಕ್ತಿ ಸೃಜನಶೀಲತೆಗೆ ಇದೆ. ಸೃಜನಶೀಲತೆಗೆ ದಾಸ್ಯವನ್ನು ಕಿತ್ತೊಗೆಯುವ, ಪಟ್ಟಭದ್ರ ಹಿತಾಸಕ್ತಿಯನ್ನು ವಿರೋಧಿಸುವ ಶಕ್ತಿ ಇದೆ. ದುರಂತವೆಂದರೆ ಅನೇಕ ಸಲ ಸೃಜನಶೀಲ ಶಕ್ತಿಗಳು ಪಟ್ಟಭದ್ರ ಹಿತಾಸಕ್ತಿಗಳ ಮುಂದೆ ಮಂಡಿಯೂರಿ ಕೂರುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು. ‘ಜನಸಂಸ್ಕೃತಿ ಜಡವಾದುದು ಅಲ್ಲ, ಪುರಾತನವಾದುದು ಅಲ್ಲ. ಜನಪದವನ್ನು ಪುನರ್ವ್ಯಾಖ್ಯಾನ ಮಾಡುವ ರೀತಿಯಲ್ಲಿ ಬರಗೂರು ಅವರು ಈ ಕಾದಂಬರಿ ಬರೆದಿದ್ದಾರೆ’ ಎಂದು ವ್ಯಾಖ್ಯಾನಿಸಿದರು.
ಕೃತಿ ಬಿಡುಗಡೆ ಮಾಡಿದ ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ, ‘ಈ ಹಿಂದೆ ಶಾಲೆಗಳಲ್ಲಿ ವಾರಕ್ಕೆ ಒಂದು ಗಂಟೆ ಕತೆ ಹೇಳಲಾಗುತ್ತಿತ್ತು. ಈಗ ಅಂತಹ ಸಂಸ್ಕೃತಿ ಇಲ್ಲ. ಕತೆ ನಮ್ಮಿಂದ ದೂರ ಆಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಡಾ. ಬರಗೂರು ರಾಮಚಂದ್ರಪ್ಪ ಮಾತನಾಡಿ, ಜನ ಉಳಿದರೆ ಭಾಷೆ ಉಳಿಯುತ್ತದೆ. ಜನಗಳ ಮೂಲಕ ಭಾಷೆಯನ್ನು ನೋಡುವ ತಾತ್ವಿಕತೆ ಬೆಳೆಸಿಕೊಳ್ಳಬೇಕು. ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಮೂಲಕ ಮಾತೃಭಾಷಾ ಶಿಕ್ಷಣಕ್ಕಾಗಿ ಹೋರಾಟ ನಡೆಯಬೇಕು. ಇದಕ್ಕೆ ರಾಷ್ಟ್ರವ್ಯಾಪಿ ಹೋರಾಟ ಅಗತ್ಯ ಎಂದರು.