ಬೆಂಗಳೂರು: ಸಂಪುಟ ವಿಸ್ತರಣೆಯೋ ಪುನಾರಚನೆಯೋ ಎನ್ನುವ ಗೊಂದಲ ಕಾಂಗ್ರೆಸ್ ಪಾಳಯದಲ್ಲಿ ಮುಂದುವರಿದಿದೆ. ಆದರೆ ಇದೀಗ ಬಂದಿರುವ ಹೊಸ ಸುದ್ದಿ ಪ್ರಕಾರ ಮಾಜಿ ಸಂಸದೆ ರಮ್ಯಾ ಅವರನ್ನು ಮಂತ್ರಿಯನ್ನಾಗಿ ಮಾಡಲು ಕಾಂಗ್ರೆಸ್ ಚಿಂತನೆ ನಡೆಸಿದೆ.
ರಮ್ಯಾ ಅವರನ್ನು ವಿಧಾನಪರಿಷತ್ಗೆ ಆಯ್ಕೆ ಮಾಡಿ ಮಂತ್ರಿ ಸ್ಥಾನ ನೀಡುವ ಬಗ್ಗೆ ಚರ್ಚೆ ಆರಂಭವಾಗಿದೆ. ಹಳೆಯ ನಾಯಕರ ಜೊತೆ ಹೊಸ ಮುಖ ಎನ್ನುವಂತೆ ರಮ್ಯಾ ಅವರಿಗೆ ಸಚಿವ ಸ್ಥಾನ ನೀಡಿದರೆ ಒಳ್ಳೆಯದು ಎನ್ನುವ ಅಭಿಪ್ರಾಯ ರಾಹುಲ್ ಪಾಳೆಯದಲ್ಲಿ ಕೇಳಿ ಬಂದಿದೆ ಎನ್ನಲಾಗಿದೆ.
ಅಂಬರೀಷ್ ಅವರನ್ನು ಕೈಬಿಟ್ಟು ರಮ್ಯಾ ಅವರಿಗೆ ಸ್ಥಾನ ನೀಡಿದರೆ ಮಂಡ್ಯದಲ್ಲಿ ಕಾಂಗ್ರೆಸ್ನವರಿಗೆ ಬೇಸರ ಆಗುವುದಿಲ್ಲ ಎನ್ನುವ ತೀರ್ಮಾನಕ್ಕೆ ಕೆಲ ನಾಯಕರ ಬಂದ ಹಿನ್ನೆಲೆಯಲ್ಲಿ ಸಚಿವ ಸ್ಥಾನದ ಮಾತುಕತೆ ಜೋರಾಗಿ ನಡೆಯುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ರಮ್ಯಾ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ರಮ್ಯಾ ಅವರಿಗೆ ಮಂತ್ರಿ ಸ್ಥಾನ, ಸಂಪುಟ ವಿಸ್ತರಣೆಯೋ ,ಪುನಾರಚನೆಯೋ ಎಂಬುದಕ್ಕೆ ಇಂದು ಸಂಜೆ ಒಳಗಡೆ ಸ್ಪಷ್ಟ ಉತ್ತರ ಸಿಗಲಿದೆ.
ಈ ಹಿಂದೆ ಮಾಧ್ಯಮಗಳ ಜೊತೆ ಮಾತನಾಡಿದ್ದ ರಮ್ಯಾ ನಾನು ರಾಜ್ಯ ರಾಜಕೀಯಕ್ಕೆ ಬರುವುದಿಲ್ಲ. ಯಾವ ಅಧಿಕಾರವು ಬೇಡ, ಎಲ್ಲೂ ಸ್ಪರ್ಧೆ ಮಾಡುವುದಿಲ್ಲ. ಆದರೆ ಅಂತಿಮವಾಗಿ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೋ ಆ ನಿರ್ಧಾರಕ್ಕೆ ನಾನು ಬದ್ಧ ಎಂದು ಹೇಳಿದ್ದರು.