ಗದಗ,ಡಿ.11: ಹೀಗೂ ಉಂಟೆ ಎಂಬ ಪ್ರಶ್ನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮಸ್ಥರನ್ನು ಆವರಿಸಿದೆ. ಕಳೆದ ಒಂದು ವಾರದಲ್ಲಿ ಇಲ್ಲಿಯ ಶಾಲಾ ಮಕ್ಕಳು ಇದ್ದಕ್ಕಿದ್ದಂತೆ ಕೂಗಾಡ್ತಾರೆ, ಚೀರಾಡ್ತಾರೆ, ಏಕಾಏಕಿಯಾಗಿ ಕುದಿಯುವ ಎಣ್ಣೆಯಲ್ಲಿ ಕೈ ಇಳಿಬಿಡುತ್ತಾರೆ… ಇಷ್ಟೆಲ್ಲಾ ಆದ್ರೂ ಅವರಿಗೆ ಏನೂ ಆಗಿಲ್ಲ. ಮೈ ಮೇಲೆ ದೇವರು, ದೆವ್ವ ಬಂದಂತೆ ಆಡುತ್ತಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಕಳೆದ ಮೊಹರಂ ಹಬ್ಬದ ವೇಳೆ ದೇವರನ್ನು ನೆಲಕ್ಕೆ ಬೀಳಿಸಿದ್ದು, ಆ ದೇವರ ಶಾಪದಿಂದ ಮಕ್ಕಳು ಹೀಗೆಲ್ಲಾ ವರ್ತಿಸುತ್ತಿದ್ದಾರೆಂಬುದು ಗ್ರಾಮಸ್ಥರ ಮಾತಾಗಿದೆ.
ಪ್ರಾರಂಭದಲ್ಲಿ 6ನೇ ತರಗತಿಯ ಓರ್ವ ವಿದ್ಯಾರ್ಥಿ ಮಾತ್ರ ಹೀಗೆ ವರ್ತಿಸುತ್ತಿದ್ದ. ಒಂದು ವಾರದಲ್ಲಿ ಸುಮಾರು 7-8 ಮಂದಿ ವಿದ್ಯಾರ್ಥಿಗಳು ಇದೇ ರೀತಿಯ ವರ್ತಿಸಲು ಆರಂಭಿಸಿದರು. ಗ್ರಾಮದ 6ನೇ ತರಗತಿ ಮತ್ತು 8ನೇ ತರಗತಿಯ ಸುಮಾರು ಏಳೆಂಟು ವಿದ್ಯಾರ್ಥಿಗಳು ಹೀಗೆ ವಿಚಿತ್ರವಾಗಿ ವರ್ತಿಸುತ್ತಿದ್ದಾರೆ.
ಹೀಗೆ ವಿದ್ಯಾರ್ಥಿಗಳು ವಿಚಿತ್ರವಾಗಿ ವರ್ತಿಸುವ ಸಮಯದಲ್ಲಿ ಬಿಸಿ ಎಣ್ಣೆಗೆ ಏಕಾಏಕಿ ಕೈ ಅದ್ದುತ್ತಾರೆ. ಶಾಲೆಯಲ್ಲಿ, ಮನೆಯಲ್ಲಿ ಎಲ್ಲೆಂದರಲ್ಲಿ ವಿಚಿತ್ರವಾಗಿ ವರ್ತಿಸುತ್ತಾರೆ. ಇವೆಲ್ಲವನ್ನೂ ಸಾಕ್ಷೀಕರಿಸುತ್ತಿರುವ ಗ್ರಾಮಸ್ಥರು ತೀವ್ರ ಆತಂಕಗೊಂಡಿದ್ದಾರೆ.