ಬೆಂಗಳೂರು: ಪುನೀತ್ ರಾಜ್ ಕುಮಾರ್ ನೇತೃತ್ವದಲ್ಲಿ ಕನ್ನಡದ ಕೋಟ್ಯಾಧಿಪತಿ ಸೀಸನ್ 1 ಮತ್ತು 2 ನಡೆದು ಕಾರ್ಯಕ್ರಮ ಕನ್ನಡಿಗರ ಮನ ಗೆದ್ದಿದ್ದು ಈಗ ಹಳೆಯ ವಿಷಯ. ಹೊಸ ವಿಷಯ ಏನೆಂದರೆ ಕನ್ನಡದ ಕೋಟ್ಯಾಧಿಪತಿ ಸೀಸನ್ 3 ಆರಂಭಿಸಲು ವಾಹಿನಿಯೊಂದು ನಿರ್ಧರಿಸಿದೆ ಎಂಬುದು.
ಈ ಶೋವನ್ನು ಯಾರು ನಡೆಸಿಕೊಡುತ್ತಾರೆ ಎಂಬುದು ಕುತೂಹಲಕರ ಸಂಗತಿ. ಪುನೀತ್ ರಾಜ್ ಕುಮಾರ್ ಅವರು 5 ಕೋಟಿ ರೂಪಾಯಿ ಸಂಭಾವನೆ ಕೇಳುತ್ತಿದ್ದಾರೆ. ಆದರೆ ಚಾನೆಲ್ ಅಷ್ಟು ಕೊಡಲು ಮುಂದೆ ಬರುತ್ತಿಲ್ಲವಂತೆ. ಹಾಗಾಗಿ ಅವರು ಶೋ ನಡೆಸಿಕೊಡುವುದರಿಂದ ಹಿಂದೆ ಸರಿದಿದ್ದಾರಂತೆ.
ಶೋ ಸಾರಥ್ಯ ವಹಿಸುವವರಲ್ಲಿ ನಟರಾದ ಉಪೇಂದ್ರ, ಯಶ್, ರಮ್ಯಾ ಮೊದಲಾದವರ ಹೆಸರು ಸುಳಿದಾಡುತ್ತಿದೆ. ಪುನೀತ್ ರಾಜ್ ಕುಮಾರ್ ಅವರು ಸಾಕಷ್ಟು ಶ್ರಮ ಹಾಕಿ ಕಾರ್ಯಕ್ರಮವನ್ನು
ಜನಪ್ರಿಯಗೊಳಿಸಿದ್ದರು. ಮನೆಗಳಲ್ಲಿ ಎಲ್ಲಾ ವರ್ಗದ ಜನರು ಕಾದು ಕುಳಿತು ಈ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದರು.
ಇದೀಗ ಅದೇ ಜನಪ್ರಿಯತೆಯನ್ನು ಕಾಯ್ದುಕೊಳ್ಳುವ, ಶೋವನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುವವರು ಬೇಕಾಗಿದೆ. ಪುನೀತ್ ಬದಲಿಗೆ ಉಪ್ಪಿ ಹಾಟ್ ಸೀಟಿನಲ್ಲಿ ಕುಳಿತು ಕಾರ್ಯಕ್ರಮ ನಡೆಸಿಕೊಡುತ್ತಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಉಪೇಂದ್ರ ಅವರಾಗಲಿ, ವಾಹಿನಿ ಕಡೆಯಿಂದಾಗಲಿ ಖಚಿತ ಸುದ್ದಿ ಹೊರಬಂದಿಲ್ಲ.