ಕರ್ನಾಟಕ

ಶಿವರಾಜ್​ಕುಮಾರ್ ನಟನೆಯ ‘ಬಾದ್​ಷಾ’ಗೆ ಕೂಡಿಬಂದ ಕಾಲ ! ಶಿವಣ್ಣ ದ್ವಿಪಾತ್ರ

Pinterest LinkedIn Tumblr

shiv

ಅವಾಗ ಇವಾಗ ಅಂತ ಮುಂದೂಡಿಕೊಂಡು ಬಂದಿದ್ದ ಶಿವರಾಜ್​ಕುಮಾರ್ ನಟನೆಯ ‘ಬಾದ್​ಷಾ’ಗೆ ಕಾಲ ಕೂಡಿಬಂದಿದೆ. ‘ಮೈಲಾರಿ’ ನಂತರ ಆರ್. ಚಂದ್ರು ಮತ್ತೊಮ್ಮೆ ‘ಸೆಂಚುರಿ ಸ್ಟಾರ್’ಗೆ ಆಕ್ಷನ್-ಕಟ್ ಹೇಳುತ್ತಿದ್ದಾರೆ. ವಿಶೇಷವೆಂದರೆ, ‘ಹ್ಯಾಟ್ರಿಕ್ ಹೀರೋ’ ಇಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ!

ಈ ಹಿಂದೆ ಸಾಕಷ್ಟು ಸಿನಿಮಾಗಳಲ್ಲಿ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಅಣ್ಣಾವ್ರ ಮಕ್ಕಳು’ ಚಿತ್ರದಲ್ಲಿ ತ್ರಿಪಾತ್ರವನ್ನೂ ಮಾಡಿದ್ದರು. ಕೊನೆಯದಾಗಿ ‘ಭಜರಂಗಿ’ ಚಿತ್ರದಲ್ಲಿ ದ್ವಿಪಾತ್ರದ ಮೂಲಕ ಯಶಸ್ಸು ಕಂಡಿದ್ದರು. ಇದೀಗ ಚಂದ್ರು ನಿರ್ದೇಶನದಡಿಯಲ್ಲಿ ಮತ್ತೊಮ್ಮೆ ಎರಡೆರಡು ಲುಕ್​ಗಳ ಮೂಲಕ ಮೋಡಿ ಮಾಡಲಿದ್ದಾರೆ. ಅಂದ್ಹಾಗೆ, ‘ಬಾದ್​ಷಾ’ ಈ ಕೂಡಲೇ ಶುರುವಾಗುತ್ತಿಲ್ಲ. ಸದ್ಯಕ್ಕೆ ಹಾಡುಗಳ ಧ್ವನಿಮುದ್ರಣಕ್ಕೆ ಮಾತ್ರ ಚಾಲನೆ ದಕ್ಕಿದೆ. ಸಿನಿಮಾ ಶುರು ಏನಿದ್ದರೂ ಏ. 1ಕ್ಕೆ. ಸದ್ಯ ಶಿವರಾಜ್​ಕುಮಾರ್ ‘ಶಿವಲಿಂಗ’ ಮತ್ತು ‘ಕಿಲ್ಲಿಂಗ್ ವೀರಪ್ಪನ್’ ಚಿತ್ರಗಳನ್ನು ಮುಗಿಸಿಕೊಟ್ಟಿದ್ದಾರೆ. ಯಾವುದು ಮೊದಲು ಬರಬೇಕು ಎಂಬುದು ನಿರ್ವಪಕರಿಗೆ ಬಿಟ್ಟಿದ್ದು ಎಂಬುದು ಅವರ ಹೇಳಿಕೆ. ಅಂತೆಯೇ ‘ಸಂತೆಯಲ್ಲಿ ನಿಂತ ಕಬೀರ’ನಿಗೆ ಚಿತ್ರೀಕರಣೋತ್ತರ ಕೆಲಸಗಳು ಬಿರುಸಿನಿಂದ ಸಾಗಿವೆ. ಇದರ ಮಧ್ಯೆ ಮಂಜು ಸ್ವರಾಜ್ ನಿರ್ದೇಶನದ ‘ಶ್ರೀಕಂಠ’ದಲ್ಲಿ ಶಿವರಾಜ್ ತೊಡಗಿಕೊಂಡಿದ್ದಾರೆ. ಇದಾದ ಬಳಿಕ ಜಯಣ್ಣ ಕಂಬೈನ್ಸ್​ನಲ್ಲೊಂದು ಚಿತ್ರ ಶುರುವಾಗಲಿದೆ.

ನೂರು ಕೋಟಿ ರೂಪಾಯಿ ಬಜೆಟ್​ನ ‘ಕಲಿ’ ಚಿತ್ರಕ್ಕಾಗಿ ಶಿವರಾಜ್​ಕುಮಾರ್ ಮತ್ತು ಸುದೀಪ್ ಅವರನ್ನು ನಿರ್ದೇಶಕ ಪ್ರೇಮ್ ಒಂದಾಗಿಸುತ್ತಿದ್ದಂತೆ, ಸ್ಯಾಂಡಲ್​ವುಡ್​ನಲ್ಲಿ ಮತ್ತಷ್ಟು ಮಲ್ಟಿಸ್ಟಾರ್ ಸಿನಿಮಾಗಳು ಬರುವ ಲಕ್ಷಣ ಕಾಣಿಸುತ್ತಿದೆ. ಡಾ. ವಿಷ್ಣುವರ್ಧನ್ ಅವರ ಜತೆ ನಟಿಸಬೇಕು ಎಂಬುದು ಶಿವರಾಜ್​ಕುಮಾರ್ ಅವರ ಕನಸಾಗಿತ್ತಂತೆ. ಆದರೆ ಅದು ನನಸಾಗಲಿಲ್ಲ. ಇದೀಗ ಸುದೀಪ್ ಜತೆ ತೆರೆ ಹಂಚಿಕೊಳ್ಳಲು ರೆಡಿಯಾಗಿದ್ದಾರೆ ಅವರು. ಈ ಚಿತ್ರದಲ್ಲಿ ಕಮಲ್ ಹಾಸನ್ ಕೂಡ ಬಣ್ಣ ಹಚ್ಚುವ ಸಾಧ್ಯತೆಗಳಿವೆ! ಅಲ್ಲದೆ, ದರ್ಶನ್ ಜತೆಗೂ ನಟಿಸಬೇಕೆಂಬುದು ಶಿವರಾಜ್​ಕುಮಾರ್ ಹಂಬಲ. ಇನ್ನು, ಪುನೀತ್ ಅವರೊಟ್ಟಿಗೂ ಸಿನಿಮಾ ಮಾಡುತ್ತಾರೆಂಬುದು ಬಹುದಿನಗಳಿಂದ ಕೇಳಿಬರುತ್ತಿರುವ ಮಾತು. ‘ದುನಿಯಾ’ ವಿಜಯ್ ಮತ್ತು ಶಿವರಾಜ್​ಕುಮಾರ್ ಕಾಂಬಿನೇಷನ್​ನ ಚಿತ್ರಕ್ಕೂ ಪ್ಲಾನ್ ರೆಡಿಯಾಗುತ್ತಿದೆಯಂತೆ. ಎಲ್ಲಕ್ಕಿಂತ ವಿಶೇಷವೆಂದರೆ, ಅಮಿತಾಭ್ ಬಚ್ಚನ್ ಜತೆ ನಟಿಸಬೇಕೆಂಬ ಆಸೆಯನ್ನೂ ಶಿವರಾಜ್​ಕುಮಾರ್ ವ್ಯಕ್ತಪಡಿಸಿದ್ದಾರೆ. ಅವರ ಕನಸನ್ನು ನನಸು ಮಾಡುವಂಥ ಚಾನ್ಸ್ ಯಾವ ನಿರ್ದೇಶಕರ ಪಾಲಾಗಲಿದೆ ಎಂಬುದೇ ಸದ್ಯದ ಕುತೂಹಲ.

Write A Comment