ಬೆಂಗಳೂರು: ಬೆಂಗಳೂರು ನಗರದಲ್ಲಿ ಸುಮಾರು 58 ಲಕ್ಷ ವಾನಗಳಿವೆ. ಇಷ್ಟೊಂದು ವಾಹನಗಳ ಸಂಚಾರ ವ್ಯವಸ್ಥೆ ತಡೆದುಕೊಳ್ಳುವ ಶಕ್ತಿ ಬೆಂಗಳೂರಿಗಿಲ್ಲ. ಹಾಗಾಗಿ ದೆಹಲಿ ನಿಯಮದಂತೆ ಬೆಂಗಳೂರಿನಲ್ಲೂ ಜಾರಿಗೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಬುಧವಾರ ವಿಕಾಸಸೌಧದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಸಿಲ್ಕ್ ಬೋರ್ಡ್ ಜಂಕ್ಷನ್, ಕೆಂಪೇಗೌಡ ಏರ್ ಪೋರ್ಟ್ ರಸ್ತೆ, ಮೈಸೂರು ರಸ್ತೆ ಹಾಗೂ ತುಮಕೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ಕ್ರಮ ಕೈಗೊಳ್ಳಲಾಗುವುದು. ಅದೇ ರೀತಿ ಎಲಿವೇಟೆಡ್ ರಸ್ತೆ ನಿರ್ಮಿಸುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ವಿವರಿಸಿದರು.
ಬೆಂಗಳೂರು ಟ್ರಾಫಿಕ್ ಮ್ಯಾನೇಜ್ ಮೆಂಟ್ ಸೆಂಟರ್ ಆಗಿದೆ. ಹಾಗಾಗಿ ಟ್ರಾಫಿಕ್ ಟಾಸ್ಕ್ ಫೋರ್ಸ್ ರಚನೆ ಕುರಿತು ಚಿಂತಿಸುತ್ತಿದ್ದೇವೆ. ಹೆಬ್ಬಾಳದಿಂದ ಚಿನ್ನಸ್ವಾಮಿ ಸ್ಟೇಡಿಯಂವರೆಗೆ ರಸ್ತೆ ಅಗಲೀಕರಣ ಮಾಡುವ ಯೋಜನೆಯೂ ಇದೆ ಎಂದರು.
ಬೆಂಗಳೂರಿನಲ್ಲಿ ಸುಮಾರು 36 ಲಕ್ಷ ದ್ವಿಚಕ್ರ ವಾಹನಗಳಿವೆ. ನಗರದಲ್ಲೂ ದಿನೇ, ದಿನೇ ಸಂಚಾರ ದಟ್ಟಣೆ ಹೆಚ್ಚಾಗುತ್ತಲೇ ಇದೆ. ಆ ನಿಟ್ಟಿನಲ್ಲಿ ರಾಜ್ಯದಲ್ಲೂ ನಾವು ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಸಂಚಾರ ದಟ್ಟಣೆಗೆ ಕಡಿವಾಣ ಹಾಕಬೇಕಾಗಿದೆ ಎಂದು ಪರಮೇಶ್ವರ್ ತಿಳಿಸಿದರು. ದೆಹಲಿಯಲ್ಲಿ ಈಗಾಗಲೇ ಸಮ, ಬೆಸ ಸಂಖ್ಯೆ ನಿಯಮ ಜಾರಿಗೆ ತರಲು ಉದ್ದೇಶಿಸಲಾಗಿದೆ. ಅದಕ್ಕೆ ಸುಪ್ರೀಂಕೋರ್ಟ್ ಕೂಡಾ ಸಮ್ಮತಿ ಸೂಚಿಸಿದೆ. ನಾವೂ ಕೂಡಾ ರಾಜ್ಯದಲ್ಲಿ ಸಮ, ಬೆಸ ಸಂಖ್ಯೆ ನಿಯಮ ಜಾರಿಗೆ ತರುವ ಬಗ್ಗೆ ಕ್ರಮಕೊಳ್ಳಲಿದ್ದೇವೆ ಎಂದು ಹೇಳಿದರು.
&ಉದಯವಾಣಿ