ಬೆಂಗಳೂರು: ಆರೋಪಿಗಳಿಂದ ಜಪ್ತಿ ಮಾಡಿ ಠಾಣೆಯಲ್ಲಿ ಇಟ್ಟಿದ್ದ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಮಹಿಳೆಯೊಬ್ಬಳನ್ನು ಜೆ.ಪಿ.ನಗರ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ತಮಿಳುನಾಡು ಮೂಲದ ದೇವಿಯನ್ನು (40) ಬಂಧಿಸಲಾಗಿದೆ. ಜೆ.ಪಿ. ನಗರದಲ್ಲಿ ವಾಸವಿದ್ದ ಈಕೆ, ಕೆಲ ವರ್ಷಗಳಿಂದ ಠಾಣೆಯನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದಳು..
ನಿತ್ಯ ಬೆಳಿಗ್ಗೆ ಬಂದು ತನ್ನ ಕೆಲಸ ಮುಗಿಸಿ ಹೋಗುತ್ತಿದ್ದ ಈಕೆ, ಇನ್ಸ್ಪೆಕ್ಟರ್ ಕೊಠಡಿಯ ಬೀರುವಿನಲ್ಲಿ ಇಟ್ಟಿದ್ದ ಜಪ್ತಿ ಮಾಡಿದ ಚಿನ್ನಾಭರಣ ಮತ್ತು ನಗದು ಮೇಲೆ ಕಣ್ಣಿಟ್ಟಿದ್ದಳು. ಅಲ್ಲದೆ, ಬೀರುವಿನ ನಕಲಿ ಕೀ ಮಾಡಿಸಿಕೊಂಡು ನಿತ್ಯ ಒಂದೊಂದೇ ಆಭರಣ ಕದಿಯುತ್ತಿದ್ದಳು. ಅಲ್ಲದೆ, ಇತ್ತೀಚೆಗೆ ₹ 10 ಸಾವಿರ ಎಗರಿಸಿದ್ದಳು.
ಜಪ್ತಿ ಮಾಡಿದ ಆಭರಣ ಮತ್ತು ಹಣವನ್ನು ಕೋರ್ಟ್ಗೆ ಹಾಜರುಪಡಿಸುವ ಸಲುವಾಗಿ, ಸಿಬ್ಬಂದಿ ಬೀರು ತೆಗೆದಾಗ ಚಿನ್ನಾಭರಣದ ಜತೆಗೆ, ₹ 10 ಸಾವಿರದ ಕಂತೆ ನಾಪತ್ತೆಯಾಗಿತ್ತು. ನಂತರ ಕೊಠಡಿಯಲ್ಲಿ ಅಳವಡಿಸಿದ್ದ ಸಿಸಿ ಟಿವಿ ಕ್ಯಾಮೆರಾವನ್ನು ಪರಿಶೀಲಿಸಿದಾಗ, ಸ್ವಚ್ಛತೆ ಕೆಲಸ ಮಾಡುತ್ತಿದ್ದ ಮಹಿಳೆಯ ಕೃತ್ಯ ಬಯಲಾಯಿತು.
ಮಾರನೆಯ ದಿನ ಏನೂ ಗೊತ್ತಿಲ್ಲದಂತೆ ತನ್ನ ಪಾಡಿಗೆ ಕೆಲಸ ಮಾಡುತ್ತಿದ್ದ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಒಪ್ಪಿಕೊಂಡಳು ಎಂದು ಪೊಲೀಸರು ತಿಳಿಸಿದರು.