ಬೆಂಗಳೂರು, ಡಿ.19: ರಾಜ್ಯ ಸರ್ಕಾರ ನೂತನ ವರ್ಷದ ಜನವರಿಯಲ್ಲಿ ಹೊಸ ಮುಖ್ಯ ಕಾರ್ಯದರ್ಶಿ ನೇಮಕ ಮಾಡುವುದರ ಜತೆಗೆ 30 ಮಂದಿ ಐಎಎಸ್ ಅಧಿಕಾರಿಗಳಿಗೆ ಬಡ್ತಿ ಭಾಗ್ಯ ನೀಡಲಿದೆ. ಹಿರಿಯ ಹಾಗೂ ಕಿರಿಯ ಐಎಎಸ್ ಅಧಿಕಾರಿಗಳಿಗೂ ಮುಂಬಡ್ತಿ ದೊರೆಯಲಿದೆ. ಈ ಸಂಬಂಧ ಸರ್ಕಾರದಲ್ಲಿ ಈಗಾಗಲೇ ಸಿದ್ಧತೆ ಆರಂಭವಾಗಿದೆ.
ಸರ್ಕಾರದ ಉನ್ನತ ಮೂಲಗಳ ಪ್ರಕಾರ 1986ನೇ ಬ್ಯಾಚ್ನ ಐಎಎಸ್ ಅಧಿಕಾರಿಗಳಾದ ವಂದಿತಾ ಶರ್ಮ, ಸಂಜೀವ್ ಕುಮಾರ್, ಸುಭಾಷ್ ಚಂದ್ರ, ಡಾ.ರಜನೀಶ್ ಗೋಯೆಲ್, ಎಂ.ಆರ್.ಕಾಂಬ್ಳೆ ಹಾಗೂ ಐಎಸ್ಎನ್ ಪ್ರಸಾದ್ ಅವರಿಗೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಹುದ್ದೆಗೆ ಬಡ್ತಿ ನೀಡಲಾಗುತ್ತದೆ. ಇವರಿಗೆ ಮುಖ್ಯಕಾರ್ಯದರ್ಶಿಗೆ ಸರಿಸಮನಾದ ವೇತನ ಪಡೆಯಲಿದ್ದಾರೆ.
1991ನೇ ಬ್ಯಾಜ್ನ ಐಎಎಸ್ ಅಧಿಕಾರಿಗಳಾದ ಎಲ್.ಕೆ.ಅತೀಕ್, ನಿಲಯ ಮಿತಾಶ್, ವಂದನಾ ಗುರ್ನಾನಿ ಹಾಗೂ ವಿ.ವಿದ್ಯಾವತಿ ಅವರಿಗೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಮುಂಬಡ್ತಿ ನೀಡಲಾಗುತ್ತದೆ. ಈ ನಾಲ್ಕು ಮಂದಿ ಅಧಿಕಾರಿಗಳ ಪೈಕಿ ವಂದನಾ ಗುರ್ನಾನಿ ಹಾಗೂ ವಿ.ವಿದ್ಯಾವತಿ ಅವರು ಕೇಂದ್ರ ಸರ್ಕಾರದ ಸೇವೆಯಲ್ಲಿದ್ದಾರೆ. 2000ನೇ ಬ್ಯಾಚ್ನ ಐಎಎಸ್ ಅಧಿಕಾರಿಗಳಾದ ಪಂಕಜ್ ಕುಮಾರ್ ಪಾಂಡೆ, ಪಿ. ಹೇಮಲತಾ,ವಿ.ಪೊನ್ನುರಾಜ್, ಎಸ್.ಎಸ್.ಪಟ್ಟಣಶೆಟ್ಟಿ ಹಾಗೂ ಎ.ಎಂ.ಕುಂಜಪ್ಪ ಅವರಿಗೆ ಕಾರ್ಯದರ್ಶಿ ಹುದ್ದೆಗೆ ಬಡ್ತಿ ನೀಡಲಾಗುತ್ತದೆ. ಪಿ. ಹೇಮಲತಾ,ವಿ.ಪೊನ್ನುರಾಜ್ ಅವರು ಕೇಂದ್ರ ಸರ್ಕಾರದ ಸೇವೆಯಲ್ಲಿದ್ದಾರೆ.
2003ರ ಬ್ಯಾಚ್ನ ಐಎಎಸ್ ಅಧಿಕಾರಿಗಳಾದ ಡಾ. ಪಿ.ಸಿ.ಜಾಫರ್, ಮನೋಜ್ಕುಮಾರ್ ಮೀನಾ, ಎಚ್.ಎಸ್.ಅಶೋಕಾನಂದ, ಎಫ್.ಆರ್.ಜಮಾದಾರ್ ಅವರಿಗೆ ಆಯ್ಕೆ ಶ್ರೇಣಿ ವೇತನ ಬಡ್ತಿ ನೀಡಲಾಗುತ್ತದೆ.
2007ನೇ ಬ್ಯಾಚ್ನ ಐಎಎಸ್ ಅಧಿಕಾರಿಗಳಾದ ಡಾ.ಕೆ.ವಿ.ತ್ರಿಲೋಕ್, ಅನುರಾಗ್ ತಿವಾರಿ ಹಾಗೂ ಕೆ.ಪಿ.ಮೋಹನ್ ರಾಜ್ ಅವರಿಗೆ ಜಂಟಿ ಕಾರ್ಯದರ್ಶಿ ಹುದ್ದೆಗೆ ಬಡ್ತಿ ನೀಡಲಾಗುವುದು. ಇನ್ನೂ 2012ನೇ ಬ್ಯಾಚ್ನ ಐಎಎಸ್ ಅಧಿಕಾರಿಗಳಾದ ಅನ್ನೀಸ್ ಕನ್ಮಾಣಿ ಜಾಯ್, ಚಾರುಲತ ಸೋಮಲ್, ಎಂ.ಸುಂದರೇಶ್ಬಾಬು, ಪವನ್ ಕುಮಾರ್ ಮಾಲಪಾಟಿ, ಕೆ.ರಾಕೇಶ್ ಕುಮಾರ್, ನಿತೇಶ್ ಪಾಟೀಲ್,ಆರ್.ರಾಮಚಂದ್ರನ್, ಸುರಲ್ಕರ ವಿಕಾಸ ಕಿಶೋರ್ ಅವರಿಗೆ ಹಿರಿಯ ಶ್ರೇಣಿ ವೇತನ ನೀಡುವದರ ಜತೆಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ಬಡ್ತಿ ನೀಡಲಾಗುವುದು ಎಂದು ಉನ್ನತ ಮೂಲಗಳು ತಿಳಿಸಿವೆ.