ತುಮಕೂರು: ಶುಕ್ರವಾರ ಬೆಳಗ್ಗೆ ವಿವಾಹಿತರಾಗಿದ್ದ ನವ ದಂಪತಿ ಶನಿವಾರ ರಾತ್ರಿಯೇ ಆತ್ಮಹತ್ಯೆ ಮಾಡಿಕೊಂಡ ಘಟನೆ ತುರುವೇಕೆರೆ ತಾಲೂಕು ಆನೇಮೆಳೆ ಗ್ರಾಮದಲ್ಲಿ ನಡೆದಿದೆ. ಪುರುಷೋತ್ತಮ್(26) ಮಂಜುಳಾ(20) ಆತ್ಮಹತ್ಯೆಗೆ ಶರಣಾದ ದಂಪತಿ. ತುರುವೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ರೈತರಾಗಿದ್ದ ಪುರುಷೋತ್ತಮ್ ಮತ್ತು ಬೆಂಗಳೂರಿನ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಂಜುಳಾ ಕಳೆದ 5 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರು ಒಕ್ಕಲಿಗರಾಗಿದ್ದು, ಇವರ ಪ್ರೀತಿಗೆ ಎರಡು ಮನೆಯಿಂದ ವಿರೋಧ ವ್ಯಕ್ತವಾಗಿತ್ತು. ವಿರೋಧ ವ್ಯಕ್ತವಾಗಿದ್ದರೂ ಇವರಿಬ್ಬರೂ ಮನೆಯವರನ್ನು ಒಪ್ಪಿಸಿ ಮದುವೆಯಾಗಲು ತೀರ್ಮಾನಿಸಿದ್ದರು.
ಸಾಕಷ್ಟು ಬಾರಿ ಮನೆಯವರನ್ನು ಒಪ್ಪಿಸಲು ಪ್ರಯತ್ನ ಪಟ್ಟರೂ ಇವರ ಮದುವೆಗೆ ಮನೆಯವರ ಕಡೆಯಿಂದ ಯಾವುದೇ ಗ್ರೀನ್ ಸಿಗ್ನಲ್ ಸಿಕ್ಕಿರಲಿಲ್ಲ. ಮನೆಯಯವರು ಒಪ್ಪದೇ ಇದ್ದಾಗ ಕೊನೆಗೆ ನಿನ್ನೆ ಇವರಿಬ್ಬರು ನಿನ್ನೆ ಆನೇಮೆಳೆಯಲ್ಲಿರುವ ಆಂಜನೇಯ ದೇವಾಲಯದಲ್ಲಿ ಮದುವೆಯಾಗಿದ್ದರು. ಮದುವೆಯಾದ ಬಳಿಕ ಮಂಜುಳಾ, ಪುರುಷತ್ತೋಮ್ ಅವರ ಮನೆಗೆ ಬಂದಿದ್ದು, ರಾತ್ರಿ ಡೆತ್ ನೋಟ್ ಬರೆದು ಇಬ್ಬರು ಸೀರೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಡೆತ್ನೋಟ್ನಲ್ಲಿ ಏನಿದೆ?
ಅಪ್ಪ ಅಮ್ಮ ನಮ್ಮನ್ನು ಕ್ಷಮಿಸಿ ಬಿಡಿ. ನಾವು ಇಷ್ಟ ಪಟ್ಟು ಮದುವೆಯಾಗಿದ್ದೆವೆ. ನಾವು ಜೀವನ ಪರ್ಯಂತ ಒಂದಾಗಿರಲು ಸಾಧ್ಯವಿಲ್ಲ. ಹೀಗಾಗಿ ನಾವು ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡಿದ್ದೇವೆ. ನಮ್ಮನ್ನು ಒಂದೇ ಗುಂಡಿಯಲ್ಲಿ ಮಣ್ಣು ಮಾಡಿ ಎಂದು ಪತ್ರ ಬರೆದಿದ್ದಾರೆ.