ಚಿತ್ರದುರ್ಗ: ‘ಇಂದಿನ ದಿನಗಳಲ್ಲೂ ದಲಿತರನ್ನು ನಾಯಿಗಳಂತೆ ಕೆಲವರು ಕಾಣುತ್ತಿರುವುದು ಅತ್ಯಂತ ನೋವಿನ ಸಂಗತಿ’ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ವಿಷಾದಿಸಿದರು.
ನಗರದ ವಿಶ್ವ ಮಾನವ ಸಾಂಸ್ಕೃತಿಕ ಶಾಲೆಯಲ್ಲಿ ಭಾನುವಾರ ನಡೆದ ಪಿಂಜಾರ ನದಾಫ್ ಸಮುದಾಯದ ರಾಜ್ಯಮಟ್ಟದ ಪ್ರಥಮ ಮಹಿಳಾ ಸಮಾವೇಶದಲ್ಲಿ ಅವರು ಮಾತನಾಡಿದರು.
‘ನಾನು ಸಹ ಅಸ್ಪೃಶ್ಯನಾಗಿದ್ದು, ಮಂತ್ರಿ ಎಂಬ ಕಾರಣಕ್ಕಾಗಿ ನನಗೆ ಗೌರವ ನೀಡುತ್ತಿದ್ದಾರೆ. ಇಲ್ಲವಾದರೆ, ನನ್ನನ್ನೂ ಕೂಡ ಮನುಷ್ಯನಂತೆ ಕಾಣುತ್ತಿರಲಿಲ್ಲ’ ಎಂದು ಹೇಳಿದರು.
‘ಮಾನವನಾಗಿ ಹುಟ್ಟಿದ ಮೇಲೆ ಯಾವ ಸಮುದಾಯಕ್ಕೇ ಸೇರಿರಲಿ, ಅವರನ್ನು ಪ್ರೀತಿ, ವಿಶ್ವಾಸದಿಂದ ಕಾಣುವಂತಹ ಗುಣವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಒಬ್ಬರಿಗೊಬ್ಬರು ಗೌರವ ನೀಡುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು’ ಎಂದು ಅವರು ಸಲಹೆ ನೀಡಿದರು.