ಬೆಂಗಳೂರು: ಮನೆ ಬಿಟ್ಟು ಪ್ರೀತಿಸಿದ ಯುವಕನ ಜತೆ ಹೋದ ಮೇನಕಾ (14) ಎಂಬ ಬಾಲಕಿ, ಆತನ ಮನೆಯಲ್ಲೇ ಶನಿವಾರ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾಳೆ.
ಯಲಹಂಕ ಡೌನ್ಬಜಾರ್ ನಿವಾಸಿ ಮೇನಕಾ ಮೃತಪಟ್ಟವಳು. ಆಕೆಯ ತಂದೆ ಸುಧಾಕರ್ ಕೊಟ್ಟಿರುವ ದೂರಿನ ಮೇಲೆ ಯಲಹಂಕ ಪೊಲೀಸರು ಯುವಕ ಕಿಶೋರ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
‘ಶನಿವಾರ ಮಧ್ಯಾಹ್ನ 3.30ರ ಸುಮಾರಿಗೆ ಕಿಶೋರ್–ಮೇನಕಾ ಇಲಿ ಪಾಷಾಣ ತಿಂದಿದ್ದರು. ಹೊಟ್ಟೆ ನೋವಿನಿಂದ ಒದ್ದಾಡುತ್ತಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದ ಮೇನಕಾ, ಸಂಜೆ 6.30ಕ್ಕೆ ಪ್ರಾಣ ಬಿಟ್ಟಳು. ಮಗನ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲವೆಂದು ವೈದ್ಯರು ಹೇಳಿದರು’ ಎಂದು ಕಿಶೋರ್ ತಾಯಿ ಮಂಜುಳಾ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾರೆ.
ಈ ಆರೋಪ ತಳ್ಳಿ ಹಾಕಿರುವ ಸುಧಾಕರ್, ‘ಮಗಳನ್ನು ಕೊಂದು ಆತ್ಮಹತ್ಯೆಯ ಕತೆ ಹೆಣೆಯುತ್ತಿದ್ದಾರೆ’ ಎಂದು ದೂರಿದ್ದಾರೆ.
ಮಾತು ಕೇಳದ ಬಾಲಕಿ: ತಳ್ಳುಗಾಡಿಯಲ್ಲಿ ತರಕಾರಿ ವ್ಯಾಪಾರ ಮಾಡುವ ಸುಧಾಕರ್, ಆಂಧ್ರಪ್ರದೇಶ ಮೂಲದವರು. ಪತ್ನಿ–ಮಗಳ ಜತೆ ಆರು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಅವರು, ಡೌನ್ಬಜಾರ್ನಲ್ಲಿ ನೆಲೆಸಿದ್ದಾರೆ. ಎಂಟನೇ ತರಗತಿ ಓದುತ್ತಿದ್ದ ಮೇನಕಾಳಿಗೆ, ಅದೇ ಪ್ರದೇಶದಲ್ಲಿ ನೆಲೆಸಿದ್ದ ಕಾರು ಚಾಲಕ ಕಿಶೋರ್ನ ಪರಿಚಯವಾಗಿತ್ತು. ಕ್ರಮೇಣ ಪರಸ್ಪರರ ನಡುವೆ ಪ್ರೀತಿ ಬೆಳೆದಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಈ ಸಂಗತಿ ತಿಳಿದ ಸುಧಾಕರ್, ಮಗಳಿಗೆ ಬುದ್ಧಿ ಹೇಳಿದ್ದರು. ಆಕೆ ಮಾತು ಕೆಳದಿದ್ದಾಗ ಡಿ.14ರಂದು ಮದನಪಲ್ಲಿಗೆ ಕರೆದೊಯ್ದು ಸಂಬಂಧಿಕರ ಮನೆಯಲ್ಲಿ ಬಿಟ್ಟು ಬಂದಿದ್ದರು. ಮಾರನೇ ದಿನವೇ ಮದನಪಲ್ಲಿಗೆ ತೆರಳಿದ ಕಿಶೋರ್, ಮೇನಕಾಳನ್ನು ತನ್ನ ಜತೆ ಕರೆದುಕೊಂಡು ಬಂದಿದ್ದ.
ನಂತರ ಇಬ್ಬರೂ ಮಂಡ್ಯದಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ದರು. ಈ ವಿಷಯ ಕಿಶೋರ್ನ ತಾಯಿ ಮಂಜುಳಾ ಅವರಿಗೆ ತಿಳಿಯಿತು. ಡಿ.31ರಂದು ಪತಿ ಜತೆ ಮಂಡ್ಯಕ್ಕೆ ತೆರಳಿದ ಅವರು, ಮನವೊಲಿಸಿ ಇಬ್ಬರನ್ನೂ ನಗರಕ್ಕೆ ಕರೆದುಕೊಂಡು ಬಂದಿದ್ದರು. ಅದೇ ದಿನ ಕಿಶೋರ್– ಮೇನಕಾ ಚಿಕ್ಕಜಾಲ ಸಮೀಪದ ದೇವಸ್ಥಾನದಲ್ಲಿ ಮದುವೆಯಾಗಿದ್ದರು ಎನ್ನಲಾಗಿದೆ.