ಬೆಂಗಳೂರು: ಸೊಸೆಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಅಕ್ರಮ ಸಂಬಂಧದ ಬಗ್ಗೆ ಪ್ರಶ್ನಿಸಿದ ಅತ್ತೆ ಹಾಗೂ ಮಾವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಕಾಡುಗೋಡಿಯ ಎಕೆಜಿ ಕಾಲೋನಿಯಲ್ಲಿ ನಡೆದಿದೆ.
ಪತಿ ಮನೆಯಲ್ಲಿಲ್ಲದಿದ್ದಾಗ ಮತ್ತೊಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ದುರ್ಗಾ(30) ಎಂಬ ಮಹಿಳೆ ತನ್ನ ಪ್ರಿಯಕರ ಆಂಜಿ(22) ಜೊತೆ ಸೇರಿ ಮಾವ ಕಣ್ಣನ್(70) ಹಾಗೂ ಅತ್ತೆ ಮನೋರಮಾ(65) ಅವರನ್ನು ಕೊಲೆ ಮಾಡಿದ್ದಾರೆ.
ದುರ್ಗಾ ಪತಿ ಮಣಿಕಂಠ ಎಂಬುವವರು ತನ್ನ ಪತ್ನಿ, ತಂದೆ ಕಣ್ಣನ್ ಹಾಗೂ ತಾಯಿ ಮನೋರಮಾ ಅವರೊಂದಿಗೆ ಎಕೆಜಿ ಕಾಲೋನಿಯ ವಾಸವಿದ್ದರು. ಮಣಿಕಂಠ ಅವರು ಲ್ಯಾಬ್ ಟೆಕ್ನಿಷಿಯನ್ ಆಗಿದ್ದು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ರಾತ್ರಿ ಕೆಲಸ ಹೋಗುತ್ತಿದ್ದ ಮಣಿಕಂಠ ಅವರು ಬೆಳಗ್ಗೆಯೇ ಮನಗೆ ವಾಪಸ್ ಆಗುತ್ತಿದ್ದರು.
ನಿನ್ನೆ ರಾತ್ರಿ ಮನೆಗೆ ಬಂದಿದ್ದ ಆಂಜಿ – ದುರ್ಗಾಳ ಜೊತೆಯಲ್ಲಿದ್ದ. ಇದಕ್ಕೆ ಮಣಿಕಂಠ ಅವರ ತಂದೆ, ತಾಯಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಆಂಜಿ ಹಾಗೂ ದುರ್ಗಾ ಮಾರಾಕಾಸ್ತ್ರಗಳಿಂದ ವೃದ್ಧ ದಂಪತಿಗಳನ್ನು ಹತ್ಯೆ ಮಾಡಿ, ಮೃತದೇಹಗಳನ್ನು ಮಂಚದ ಕೆಳಗೆ ನೂಕಿದ್ದಾರೆ.
ಇನ್ನು ಪತಿ ಮಣಿಕಂಠ ಎಂದಿನಂತೆ ಬೆಳಗ್ಗೆ ಮನೆಗೆ ಆಗಮಿಸಿದ್ದು, ಆತನ ಮೇಲೂ ಹಲ್ಲೆ ನಡೆಸಿ ಕೊಲ್ಲಲೆತ್ನಿಸಿದ್ದಾರೆ. ಈ ವೇಳೆ ಗಲಾಟೆಯ ಸದ್ದು ಕೇಳಿ ಓಡಿ ಬಂದ ಅಕ್ಕಪಕ್ಕದವರು ಪೊಲೀಸರು ಸುದ್ದಿ ಮುಟ್ಟಿಸಿದ್ದಾರೆಂದು ಆಗ್ನೇಯ ವಲಯ ಡಿಸಿಪಿ ಡಾ.ಬೋರಲಿಂಗಯ್ಯ ಅವರು ತಿಳಿಸಿದ್ದಾರೆ.
ಈ ಸಂಬಂಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುರ್ಗಾ ಹಾಗೂ ಆಂಜಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.