ಮೈಸೂರು, ಜ.5- ನಗರದಲ್ಲಿರುವ ಸಿಎಫ್ಟಿಆರ್ಐ ನಿರ್ದೇಶಕ ಡಾ.ರಾಮರಾಜಶೇಖರನ್ ಅವರ ವಿರುದ್ಧ ಅದೇ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಜ್ಞಾನಿಯೊಬ್ಬರು ದೇವರಾಜ ಠಾಣೆಯಲ್ಲಿ ಕೊಲೆ ಬೆದರಿಕೆ ದೂರು ನೀಡಿದ್ದಾರೆ. ಸಂಸ್ಥೆಯ ನಿರ್ದೇಶಕರು ಕೊಲೆ ಬೆದರಿಕೆ ಹಾಕಿ ದ್ದಾರೆ. ಹಾಗಾಗಿ ತಮಗೆ ರಕ್ಷಣೆ ನೀಡಬೇಕೆಂದು ಸಿಎಫ್ಟಿಆರ್ಐನ ಫುಡ್ ಇಂಜಿನಿಯರಿಂಗ್ ವಿಭಾಗದ ಮುಖ್ಯ ವಿಜ್ಞಾನಿ ಡಾ.ಕೆ.ಎಸ್.ಎಂ.ಎಸ್. ರಾಘವರಾವ್ ರಾತ್ರಿ ದೂರು ನೀಡಿದ್ದಾರೆ.
ಘಟನೆಯ ವಿವರ: ನಿನ್ನೆ ಸಿಎಫ್ಟಿಆರ್ಐನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಂಸದ ಪ್ರತಾಪ್ಸಿಂಹ ಅವರು ಮಾತನಾಡುತ್ತಾ, ಸಂಸ್ಥೆಯಲ್ಲಿ ಕನ್ನಡಿಗರಿಗೆ ಆಗುತ್ತಿರುವ ಕಿರುಕುಳ ಹಾಗೂ ಕಡೆಗಣನೆ ಸಹಿಸಲು ಸಾಧ್ಯವಿಲ್ಲ. ಇದನ್ನು ಎಚ್ಚರಿಕೆಯಾಗಿಯೂ ಅಥವಾ ಸಲಹೆಯಾಗಿಯೂ ಸ್ವೀಕರಿಸಬಹುದು ಎಂದು ಹೇಳಿದ್ದರು.
ಕಾರ್ಯಕ್ರಮದ ನಂತರ ನಿರ್ದೇಶಕರು ರಾಘವರಾವ್ ಅವರನ್ನು ತಮ್ಮ ಛೇಂಬರಿಗೆ ಕರೆಸಿ ಸಂಸದರು ಆ ರೀತಿ ಮಾತನಾಡಲು ನೀವೇ ತಿಳಿಸಿದ್ದೀರಾ ಎಂದು ರೇಗಿ, ನಾನು ನಿನ್ನನ್ನು ನೋಡಿಕೊಳ್ಳುತ್ತೇನೆ. ನಾನು ನಿನ್ನನ್ನು ಯಾವಾಗ ಬೇಕಾದರೂ ಕೊಲೆ ಮಾಡುತ್ತೇನೆ ಎಂದು ಕುತ್ತಿಗೆಗೆ ಕೈ ಹಾಕಿ ಬಾಗಿಲ ಕಡೆಗೆ ತಳ್ಳಿ, ಥಳಿಸಲು ಯತ್ನಿಸಿದರು ಎಂದು ದೂರಿನಲ್ಲಿ ದಾಖಲಿಸಿದ್ದಾರೆ.
ನಾನು 2018ರವರೆಗೆ ನಿರ್ದೇಶಕನಾಗಿರುತ್ತೇನೆ. ಯಾರೂ ನನ್ನನ್ನು ಏನೂ ಮಾಡಿಕೊಳ್ಳಲು ಸಾಧ್ಯವಿಲ್ಲ. ನಾನು ಮನಸ್ಸು ಮಾಡಿದರೆ ನಿಮ್ಮ ಮೇಲೆ ಆರೋಪ ಹೊರಿಸಿ, ಜೈಲಿಗೆ ಕಳುಹಿಸುತ್ತೇನೆ ಎಂದು ಹೇಳಿ ಛೇಂಬರ್ನಿಂದ ಹೊರಗೆ ತಳ್ಳಿದರು. ಈ ಹಿನ್ನೆಲೆಯಲ್ಲಿ ನನಗೆ ಜೀವ ಬೆದರಿಕೆ ಇರುವುದರಿಂದ ನನಗೆ ಸೂಕ್ತ ರಕ್ಷಣೆ ನೀಡಿ ಎಂದು ರಾಘವರಾವ್ ಪೊಲೀಸರ ಮೊರೆ ಹೋಗಿದ್ದಾರೆ.