ಮೈಸೂರು: ರಾಜಕೀಯ ಪುನರ್ಜನ್ಮ ನೀಡಿದ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಮುಂದಿನ ಚುನಾವಣೆಯಲ್ಲಿಯೂ ಸ್ಪರ್ಧಿಸುವ ಸುಳಿವನ್ನು ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ.
ಶನಿವಾರ ಮೈಸೂರಿಗೆ ಆಗಮಿಸಿರುವ ಸಿದ್ದರಾಮಯ್ಯ ಅವರು ತಮ್ಮ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ಚಾಮುಂಡೇಶ್ವರಿ ಕ್ಷೇತ್ರಕ್ಕೆ ನಾನು ಮತ್ತೊಮ್ಮೆ ಬಂದರೂ ಬರಬಹುದು ಎಂದ ಅವರು ಬರಬೇಕೋ ಬೇಡವೋ ಎಂದು ನೆರೆದ ಜನರನ್ನೇ ಪ್ರಶ್ನೆ ಮಾಡಿದರು. ಇದಕ್ಕೆ ಜನರು ತಮ್ಮ ಕರತಾಡನದ ಮೂಲಕವೇ ತಮ್ಮ ಹರ್ಷ ವ್ಯಕ್ತಪಡಿಸಿದರು.
ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆಯಲ್ಲಿ ನೀವು ನನ್ನನ್ನು ಗೆಲ್ಲಿಸದೇ ಇದ್ದಿದ್ದರೆ ನನ್ನ ರಾಜಕೀಯ ಜೀವನವೇ ಅಂತ್ಯಗೊಳ್ಳುತ್ತಿತ್ತು. ರಾಜಕೀಯವಾಗಿ ನೀವು ನನ್ನನ್ನು ಉಳಿಸಿದ್ದೀರಿ. ನೀವು ಸದಾ ನನ್ನ ನೆನಪಿನಲ್ಲಿ ಇರುತ್ತೀರಿ ಎಂದು ಹೇಳಿದರು.