ಮೈಸೂರು: ಅಕ್ರಮ ಮರಳು ಅಡ್ಡೆ ಮೇಲೆ ದಾಳಿ ನಡೆಸಿದ ಇನ್ಸ್ಪೆಕ್ಟರ್ ಮೇಲೆಯೇ ದಂಧೆಕೋರರು ಹಲ್ಲೆ ನಡೆಸಿದ ಪರಿಣಾಮ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ಠಾಣೆಗೆ ಓಡಿ ಬಂದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೆಟ್ಟಪುರ ಠಾಣಾ ವ್ಯಾಪ್ತಿಯ ಚಾಮರಾಯನ ಪೇಟೆ ಬಳಿಯ ಕಾವೇರಿ ನದಿಯಲ್ಲಿ ಅಕ್ರಮ ಮರಳು ಮಾಫಿಯಾ ನಡೆಯುತ್ತಿತ್ತು. ಈ ಭಾಗದ ಮತ್ತೊಂದು ದಂಡೆಯಾದ ಕಿರಂಗಾಲದ ಕಡೆಯಲ್ಲಿ ದೋಣಿ ಸಹಾಯದಿಂದ ನೀರಲ್ಲಿ ಮುಳುಗಿ ಮರಳನ್ನು ತೆಗೆದು ದಂಡೆಯತ್ತ ಸಾಗಿಸಲಾಗುತ್ತಿತ್ತು.
ಈ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಬೆಟ್ಟಪುರ ಠಾಣೆಯ ಎಸ್ಐ ಅನಿಲ್ಕುಮಾರ್ ಮತ್ತು ಸಿಬ್ಬಂದಿ ದೋಣಿ ಮೂಲಕ ಮರಳು ಎತ್ತುತ್ತಿದ್ದ ಸ್ಥಳದತ್ತ ತೆರಳಿದ್ದಾರೆ. ಈ ವೇಳೆ ದಾಳಿಕೋರರ ಗುಂಪು ಪೊಲೀಸರತ್ತ ಕಲ್ಲು ತೂರಾಟ ನಡೆಸಿದೆ. ಇತ್ತ ಪೊಲೀಸರು ಜೀವ ಭಯ ಹೆಚ್ಚಿದಾಗ ಕೈಗೆ ಸಿಕ್ಕ ಮರಳು ಅಡ್ಡೆಯ ಒಂದೆರಡು ದೋಣಿಗಳಲ್ಲೇ ವಾಪಸ್ಸಾಗಿದ್ದಾರೆ.
ಆದರೆ ವಾಪಸ್ಸಾಗುತ್ತಿದ್ದ ಪೊಲೀಸರನ್ನೇ ಅಟ್ಟಾಡಿಸಿದ ಮರಳು ಲೂಟಿಕೋರರು ಮೂರ್ನಾಲ್ಕು ದೋಣಿಗಳಲ್ಲಿ ಆಗಮಿಸಿ ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ. ಕೊನೆಗೆ ದಾಳಿಕೋರರಿಂದ ತಪ್ಪಿಸಿಕೊಂಡು ಠಾಣೆಗೆ ಬಂದ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಹೆಚ್ಚುವರಿ ಪೊಲೀಸರ ತಂಡದೊಂದಿಗೆ ಅಕ್ರಮ ಮರಳು ಲೂಟಿಕೋರರ ಬಂಧನಕ್ಕೆ ಮುಂದಾಗಿದ್ದಾರೆ.