ಹಾಸನ: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಯುವತಿಯ ಅಂಗಾಂಗಗಳನ್ನು ಪೋಷಕರು ದಾನ ಮಾಡಿದ ಘಟನೆ ಹಾಸನದಲ್ಲಿ ನಡೆದಿದೆ.
ಆಲೂರು ತಾಲೂಕಿನ ಕಾರಿಗನಹಳ್ಳಿ ನಿವಾಸಿ ಈರೇಗೌಡ ಎಂಬುವರ ಪುತ್ರಿ ಸಂಜನಾ(18) ಅಪಘಾತದಲ್ಲಿ ಗಾಯಗೊಂಡಿದ್ದ ಯುವತಿ. ಮೈಸೂರಿನಲ್ಲಿ ಇಂಜಿನಿಯರಿಂಗ್ ಎಲೆಕ್ಟ್ರಾನಿಕ್ಸ್ ಓದುತ್ತಿದ್ದ ಸಂಜನಾ ಕಳೆದ ಭಾನುವಾರ ತನ್ನ ಗೆಳತಿ ಜೊತೆ ದ್ವಿಚಕ್ರವಾಹನದಲ್ಲಿ ಹೋಗುವ ಸಂದರ್ಭದಲ್ಲಿ ಅಪಘಾತಕ್ಕೆ ಈಡಾಗಿ ಮೆದುಳು ನಿಷ್ಕ್ರೀಯಗೊಂಡಿತ್ತು.
ತಲೆಗೆ ಹೆಲ್ಮೆಟ್ ಧರಿಸದ ಕಾರಣ ಗಂಭೀರವಾಗಿ ಗಾಯಗೊಂಡ ಸಂಜನಾಗೆ ಮೈಸೂರಿನ ಖಾಸಗಿ ಆಸ್ಪತ್ರೆ ಮತ್ತು ಬೆಂಗಳೂರಿನ ನಿಮ್ಹಾನ್ಸ್ನಲ್ಲಿ ಚಿಕಿತ್ಸೆ ನೀಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗಿಲ್ಲ. ಮೆದುಳು ಸಂಪೂರ್ಣ ಸ್ವಾಧೀನ ಕಳೆದುಕೊಂಡಿದ್ದು ಬದುಕುವುದು ಅನುಮಾನವೆಂದು ವೈದ್ಯರು ತಿಳಿಸಿದ್ದರು.
ಹೀಗಾಗಿ ಆಕೆಯ ಪೋಷಕರು ಹಾಸನದ ಜಿಲ್ಲಾಸ್ಪತ್ರೆಯಲ್ಲಿ ಸಂಜನಾ ಅಂಗಾಗಗಳನ್ನು ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಯುವತಿ ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಕಂಡಿದ್ದಾಳೆ.