ಮುಂಬೈ,ಅ.24: ಪ್ರಧಾನಿ ಮೋದಿ ಅವರ ಜನಪ್ರಿಯತೆ ಇರುವವರೆಗೂ ಬಿಜೆಪಿಗೆ `ಮೋದಿ ಆಮ್ಲಜನಕ’ ದೊರೆಯಲಿದೆ. ಜನಪ್ರಿಯತೆ ಮಾಸಿ ಹೋದಂತೆ ಬಿಜೆಪಿ ಪ್ರಭಾವವೂ ತಗ್ಗುತ್ತದೆ ಎಂದು ಶಿವಸೇನೆ, ಮಿತ್ರ ಪಕ್ಷ ಬಿಜೆಪಿ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿದೆ.
ದಸರಾ ರ್ಯಾಲಿಯನ್ನು ಯಶಸ್ವಿಗೊಳಿಸುವ ಮೂಲಕ ಬಿಜೆಪಿಗೆ ಕಠಿಣ ಸಂದೇಶ ರವಾನಿಸಿರುವ ಶಿವಸೇನೆ, ಮುಂಬರುವ ಚುನಾವಣೆಯಲ್ಲಿ ಅಗತ್ಯಬಿದ್ದರೆ ಶಿವಸೇನೆ ಏಕಾಂಗಿಯಾಗಿ ಸ್ಪರ್ಧಿಸಲು ಸರ್ವ ಸಿದ್ಧತೆ ನಡೆಸುತ್ತಿದೆ ಎಂಬುದನ್ನು ಪ್ರತಿಬಿಂಬಿಸಿದೆ.
ಬಿಜೆಪಿ ಮೋದಿ ಆಮ್ಲಜನಕದಿಂದ ಉಸಿರಾಡುತ್ತಿದೆ. ಮೋದಿ ಜನಪ್ರಿಯತೆ ಮಾಸಿ ಹೋದರೆ ಬಿಜೆಪಿ ನೆಲ ಕಚ್ಚುತ್ತದೆ. ಆದರೆ ಶಿವಸೇನೆ ತನ್ನ ವಿಚಾರಗಳು, ಹೋರಾಟ ಮತ್ತು ದೇಶಭಕ್ತಿಯ ನೆಲೆಯ ಮೇಲೆ ನಿಂತಿದೆ. ಹಿಂದೂತ್ವ, ದೇಶಭಕ್ತಿ, ಸಾಮಾನ್ಯ ಜನರ ಜೀವನವನ್ನು ಹಸನುಗೊಳಿಸುವ ಸಂಕಲ್ಪ, ಮಹಾರಾಷ್ಟ್ರದ ಅಭಿವೃದ್ಧಿ ವಿಚಾರದಲ್ಲಿ ಶಿವಸೇನೆ ಎಂದಿಗೂ ರಾಜಿ ಆಗುವುದಿಲ್ಲ. ನಮ್ಮ ನಂಬಿಕೆಗಳನ್ನು ಎಷ್ಟೇ ಬೆಲೆ ತೆತ್ತಾದರೂ ಉಳಿಸಿಕೊಳ್ಳುತ್ತೇವೆ ಎಂದು ಶಿವಸೇನೆ ತಿಳಿಸಿದೆ.
ಭವಿಷ್ಯದಲ್ಲಿ ಶಿವಸೇನೆ ತಾನು ನಂಬಿರುವ ತತ್ವಗಳಿಗಾಗಿ ಹೋರಾಟ ಮುಂದುವರೆಸಲಿದೆ. ಯಾರು ಬೇಕಾದರೂ ನಮ್ಮೊಂದಿಗೆ ಕೈಜೋಡಿಸಲಿ, ಇಲ್ಲವೇ ಬಿಡಲಿ. ಶಿವಸೇನೆಯ ಹೋರಾಟದ ಹಾದಿಯನ್ನು ಯಾರಿಂದಲೂ ಮುಚ್ಚಲು ಸಾಧ್ಯವಿಲ್ಲ ಎಂದು ಶಿವಸೇನೆ ಹೇಳಿದೆ.
ಶರದ್ ಪವಾರ್ ಅವರ ರಾಜಕೀಯದ ಬಗ್ಗೆ ಗಂಭೀರವಾಗಿ ಚಿಂತಿಸುವ ಅಗತ್ಯವಿಲ್ಲ. ಅವರು ಯಾವಾಗ ಜಾತ್ಯತೀತರಾಗುತ್ತಾರೋ, ಯಾವಾಗ ಬಿಜೆಪಿಯನ್ನು ಹೊಗಳಲು ಶುರು ಮಾಡುತ್ತಾರೋ ಎಂಬುದು ಅವರಿಗೇ ಗೊತ್ತಿಲ್ಲ ಎಂದು ಶಿವಸೇನೆ ಕಿಡಿಕಾರಿದೆ.