ಪುಣೆ: ಪತ್ನಿ ಜೀನ್ಸ್ ಪ್ಯಾಂಟ್ ಹಾಗೂ ಟಿ ಶರ್ಟ್ ಹಾಕುವುದನ್ನು ಇಷ್ಟಪಡದ ಪಾಪಿ ಪತಿರಾಯ ತನ್ನ ಪತ್ನಿಯನ್ನೇ ಕೊಂದು ಪರಾರಿಯಾಗಿರುವ ಘಟನೆ ಪುಣೆಯಲ್ಲಿ ನಡೆದಿದೆ.
ಇಲ್ಲಿನ ಗುಲ್ತೇಕ್ದಿ ಪ್ರದೇಶದ ಮೀನಾತಾಯಿ ಠಾಕ್ರೆ ಸ್ಲಮ್ನಲ್ಲಿ ಈ ಘಟನೆ ನಡೆದಿದ್ದು 21 ವರ್ಷದ ಪೂಜಾ ನಿಶಾದ್ ಕೊಲೆಯಾದ ಮಹಿಳೆ. ಘಟನೆ ಬಳಿಕ ಆಕೆಯ ಪತಿ ಆರೋಪಿ ರಂಜಿತ್ ನಿಶಾದ್ ಉತ್ತರ ಪ್ರದೇಶಕ್ಕೆ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಸ್ವರಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೂಜಾ ಹಾಗೂ ರಂಜಿತ್ ಹೈದರಾಬಾದ್ ಮೂಲದವರಾಗಿದ್ದು ಉದ್ಯೋಗಕ್ಕಾಗಿ ಪುಣೆಗೆ ಬಂದಿದ್ದು, 4 ತಿಂಗಳಿಂದ ಮೀನಾತಾಯಿ ಠಾಕ್ರೆ ಸ್ಲಮ್ನಲ್ಲಿ ವಾಸವಾಗಿದ್ದರು.
ಪೂಜಾಗೆ ಜೀನ್ಸ್ ಪ್ಯಾಂಟ್ ಟಿ-ಶರ್ಟ್, ಶರ್ಟ್ ಹಾಕುವುದು ಇಷ್ಟವಾಗಿತ್ತು. ಆದರೆ ರಂಜಿತ್ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ. ಅಕ್ಟೋಬರ್ 27ರಂದು ಈ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆಯಾಗಿತ್ತು. ಮನೆಯ ಸುತ್ತಮುತ್ತ ಇರುವ ಹೆಣ್ಮಕ್ಕಳಂತೆಯೇ ಇರು ಎಂದು ರಂಜಿತ್ ಆಕೆಗೆ ಬುದ್ಧಿವಾದ ಹೇಳಿದ್ದ. ಆದರೆ ಪೂಜಾ ಇದನ್ನು ನಿರಾಕರಿಸಿದ್ದಳು. ಇದರಿಂದ ಸಿಟ್ಟಿಗೆದ್ದ ರಂಜಿತ್ ಆಕೆಯನ್ನು ಉಸಿರುಗಟ್ಟಿಸಿ ಸಾಯಿಸಿದ್ದಾನೆ. ಮರುದಿನ ಮನೆಯ ಬಾಗಿಲು ಹಾಕಿ ಪರಾರಿಯಾಗಿದ್ದಾನೆ ಎಂದು ಸ್ವರ್ಗೇಟ್ ಠಾಣೆ ಎಸ್ಐ ದೀಪಕ್ ನಿಕಮ್ ಹೇಳಿದ್ದಾರೆ.
ಶುಕ್ರವಾರ ದುರ್ವಾಸನೆ ಬಂದ ಹಿನ್ನೆಲೆಯಲ್ಲಿ ಸ್ಥಳೀಯರು ದೂರು ನೀಡಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ರಂಜಿತ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.