‘ಕರಿಯ ಐ ಲವ್ ಯೂ ಕರುನಾಡ ಮೇಲಾಣೆ…’ ಗೀತೆ ಹಿಟ್ ಆಗುತ್ತಲೇ ಫಿಲ್ಮಿ ‘ದುನಿಯಾ’ದಲ್ಲಿ ಓಪನ್ ಆಗಿ ಐ ಲವ್ ಯೂ ಹೇಳೋ ಟ್ರೆಂಡ್ ಕೂಡ ಮರುಚಾಲನೆ ಪಡೆಯಿತು ಅನ್ನಬಹುದು. ಗೊಂಬೆಗಳ ಲವ್, ಸಿಂಪಲ್ಲಾಗ್ ಒಂದ್ ಲವ್ಸ್ಟೋರಿ, ಆರ್ಯಾಸ್ ಲವ್, ಲವ್ ಇನ್ ಮಂಡ್ಯ, ಲವ್ ಈಸ್ ಪಾಯ್ಸನ್, ಲವ್ ಶೋ, ಜಸ್ಟ್ ಲವ್, ಫೇರ್ ಆಂಡ್ ಲವ್ಲಿ… ಹೀಗೆ ಶೀರ್ಷಿಕೆಯಲ್ಲೇ ಲವ್ಕಥೆ ಸಾರುತ್ತ ಬಂದ ಚಿತ್ರಗಳು ಅದೆಷ್ಟೋ. ಅವುಗಳಿಗೀಗ ಹೊಸ ಸೇರ್ಪಡೆ, ‘ಮಾವ ಐ ಲವ್ ಯೂ’!
ಹಿಂದೊಮ್ಮೆ ಬಂದುಹೋದ ‘ನಮಿತಾ ಐ ಲವ್ ಯೂ’, ಸದ್ಯ ತೆರೆಗೆ ಸಿದ್ಧವಿರುವ ‘ಲವ್ಯುೂ ಆಲಿಯಾ’ ಹಾಗೂ ಶುರುವಾಗಿ ನಿಂತುಹೋದ ‘ಮುಖ್ಯಮಂತ್ರಿ ಲವ್ ಯೂ’ ಚಿತ್ರಗಳನ್ನು ನೆನಪಿಸುವಂಥ ಈ ಶೀರ್ಷಿಕೆ ಇಟ್ಟುಕೊಂಡು ಹೊಸ ಸಿನಿಮಾ ಸಾಹಸ ಮಾಡಹೊರಟಿರುವವರು ‘ದಿಲ್ವಾಲ’ ಅನಿಲ್ಕುಮಾರ್. ಸುಮಂತ್ ಶೈಲೇಂದ್ರ ಅವರನ್ನು ಹೀರೊ ಆಗಿ ರೀಲಾಂಚ್ ಮಾಡಿದ್ದ ಅನಿಲ್, ಈಗ ‘ಕೃಷ್ಣ-ಲೀಲಾ’ ಯಶಸ್ಸಿನಲೆಯಲ್ಲಿ ತೇಲುತ್ತಿರುವ ಕೃಷ್ಣ ಅಜೇಯ ರಾವ್ ನಾಯಕತ್ವದಲ್ಲಿ ಹೊಸ ಚಿತ್ರಕ್ಕೆ ಸ್ಕೆಚ್ ಹಾಕಿದ್ದಾರೆ. ಆಗಸ್ಟ್ನಿಂದ ಶೂಟಿಂಗ್ ಹಚ್ಚಿಕೊಳ್ಳಲಿರುವ ಆ ಚಿತ್ರದ ನಾಯಕಿ ಯಾರು ಗೊತ್ತೇ?
ಅಮೂಲ್ಯ! ‘ಮಳೆ’ ಬಿಡುಗಡೆಗಾಗಿ ಕಾಯುತ್ತಿರುವ ಅಮೂಲ್ಯ, ಸಾಕಷ್ಟು ಚೂಸಿ ಎಂದೇ ಈವರೆಗೆ ಕರೆಸಿಕೊಳ್ಳುತ್ತಿದ್ದರು. ಆದರೆ ವ್ಯಾಸಂಗ ಮುಗಿಯುತ್ತಲೇ ಹೆಚ್ಚೆಚ್ಚು ಅವಕಾಶಗಳತ್ತ ಮುಕ್ತವಾಗಿ ತೆರೆದುಕೊಂಡಿದ್ದಾರೆ. ಚಿರಂಜೀವಿ ಸರ್ಜಾ ಜತೆ ‘ರಾಮ್ೕಲಾ’ದಲ್ಲಿ ನಟಿಸುತ್ತಿರುವ ಅವರು, ಗೀತರಚನೆಕಾರ ಕವಿರಾಜ್ ನಿರ್ದೇಶನದಲ್ಲಿ ಮೂಡಿಬರಲಿರುವ ‘ಮದುವೆಯ ಮಮತೆಯ ಕರೆಯೋಲೆ’ ಚಿತ್ರಕ್ಕೂ ನಾಯಕಿ. ಅಷ್ಟರಲ್ಲಾಗಲೇ, ‘ಮಾವ ಐ ಲವ್ ಯೂ’ ಎನ್ನಲು ಸಜ್ಜಾಗಿದ್ದಾರೆ. ಅಮೂಲ್ಯ ಅಭಿಮಾನಿಗಳು ‘ಐ ಲವ್ ಯೂ’ ಅಂತ ಬೀಗಲು ಇದಕ್ಕಿಂತ ಬೇರೆ ಕಾರಣ ಬೇಕೇ?!