ಮನೋರಂಜನೆ

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಕೆ.ಎಸ್.ಎಲ್. ಸ್ವಾಮಿ ಇನ್ನಿಲ್ಲ

Pinterest LinkedIn Tumblr

K. S. L. Swamy passes away

ಬೆಂಗಳೂರು: ತೀವ್ರ ಅನಾರೋಗ್ಯದಿಂದ ಬಳಲುತಿದ್ದ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಕೆ.ಎಸ್.ಎಲ್. ಸ್ವಾಮಿ (77) ಅವರು ಮಂಗಳವಾರ ನಿಧನರಾಗಿದ್ದಾರೆ.

ಹಲವು ದಿನಗಳಿಂದಲ ಶ್ವಾಸಕೋಶ ಸೋಂಕಿನಿಂದ ಬಳುತ್ತಿದ್ದ ಸ್ವಾಮಿ ಅವರಿಗೆ ಕೆಲವು ದಿನಗಳ ಹಿಂದೆ ಲಘು ಹೃದಯಾಘಾತವಾಗಿತ್ತು. ಹೀಗಾಗಿ ಸ್ವಾಮಿ ಅವರು ಕೊಲಂಬಿಯಾ ಆಸ್ಪತ್ರೆಗೆ ದಾಖಲಾಗಿದ್ದರು. 45 ದಿನಗಳಿಂದಲೂ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ಮಧ್ಯಾಹ್ನ 3.30ರ ಸುಮಾರಿಗೆ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು. ಆದರೆ, ನಿನ್ನೆ ರಾತ್ರಿ ಇದ್ದಕ್ಕಿಂತೆ ತೀವ್ರ ಉಸಿರಾಟದ ಸಮಸ್ಯೆಯುಂಟಾದ್ದರಿಂದ ಸ್ವಗೃಹದಲ್ಲೇ ತಡರಾತ್ರಿ 2 ಗಂಟೆ ಸುಮಾರಿಗೆ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

1938ರಲ್ಲಿ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿಯಲ್ಲಿ ಜನಿಸಿದ್ದ ಕೆ.ಎಸ್.ಎಲ್.ಸ್ವಾಮಿ ಅವರು, ಕಥೆಗಾರ, ನಟ ಹಾಗೂ ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡ್ಡಿದ್ದರು. ಜಿ.ವಿ.ಅಯ್ಯರ್, ಎಂ.ಆರ್.ವಿಠಲ್ ಅವರ ಬಳಿ ಕೆಲಸ ಕಲಿತಿದ್ದ ಸ್ವಾಮಿ ಅವರು, ಕನ್ನಡ ಚಿತ್ರರಂಗದ ದಿಗ್ಗಜರೆಂದೇ ಖ್ಯಾತಿಹೊಂದಿದ್ದ ಪುಟ್ಟಣ್ಣ ಕಣಗಲ್ ಜೊತೆ ಹಲವು ವರ್ಷಗಳಿಂದ ಕೆಲಸ ಮಾಡಿದ್ದರು. 1966ರಲ್ಲಿ ಸ್ವತಂತ್ರ ನಿರ್ದೇಶಕರಾಗಿ ವೃತ್ತಿ ಬದುಕು ಆರಂಭಿಸಿದ್ದರು. ಇದರಂತೆ ಜಿಮ್ಮಿಗಲ್ಲು, ಗಾಂಧಿನಗರ, ಕುಳ್ಳ ಏಜೆಂಟ್ 000, ಮಲಯಮಾರುತ, ಜಂಬೂ ಸವಾರಿ ಚಿತ್ರಗಳನ್ನು ನಿರ್ದೇಶಿಸಿದ್ದರು. ಈ ವರೆಗೂ ಸ್ವಾಮಿ ಅವರು 35 ಕ್ಕೂ ಚಿತ್ರಗಳನ್ನು ನಿರ್ದೇಶಿಸಿದ್ದು, ಮಕ್ಕಳ ಚಿತ್ರ ಜಂಬೂಸವಾರಿಗೆ 1989ರಲ್ಲಿ ಸ್ವರ್ಣ ಕಮಲ ಪ್ರಶಸ್ತಿ ದೊರೆತಿತ್ತು. ಇದಲ್ಲದೇ ಸ್ವಾಮಿ ಅವರು ಕಿರುತರೆಯಲ್ಲಿಯೂ ಸಾಕಷ್ಟು ಧಾರಾವಾಹಿಯಲ್ಲಿ ನಟಿಸಿದ್ದು, ಸ್ವಾಮಿ ಅವರ ನಟನೆಗೆ ಜನ ಮಾರುಹೋಗಿದ್ದರು.

ಸಾವಿನಲ್ಲೂ ಸಾರ್ಥಕತೆ
ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದ ಕೆ.ಎಸ್.ಎಲ್. ಸ್ವಾಮಿ ತಮ್ಮ ಸಾವಿನ ನಂತರವೂ ಪರರಿಗೆ ಉಪಕಾರ ಮಾಡುವಂತಹ ಕೆಲಸ ಮಾಡಿದ್ದು, ಸಾವಿನ ನಂತರ ತಮ್ಮ ದೇಹವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾನ ಮಾಡಿದ್ದಾರೆ. ಇದಲ್ಲದೇ, ಕಣ್ಣುಗಳ ದಾನವನ್ನು ನಾರಾಯಣ ಆಸ್ಪತ್ರೆಗೆ ನೀಡಿದ್ದಾರೆ. ಸ್ವಾಮಿ ಅವರ ಇಚ್ಛೆಯಂತೆಯೇ ಕುಟುಂಬಸ್ಥರು ದೇಹ ದಾನ ಮಾಡಲು ಒಪ್ಪಿಗೆ ಸೂಚಿಸಿದ್ದು, ಸಂಜೆ 4 ಗಂಟೆ ದೇಹದಾನ ಮಾಡಲು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.

ಅಂತಿಮ ದರ್ಶನ
ಕೆ.ಎಸ್.ಎಲ್. ಸ್ವಾಮಿ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ರವೀಂದ್ರ ಕಲಾಕ್ಷೇತ್ರದ ಹಿಂಭಾಗದ ಬಯಲು ರಂಗಮಂದಿರದಲ್ಲಿ ಇಡಲಾಗುತ್ತಿದ್ದು, ಮಧ್ಯಾಹ್ನ 12 ಗಂಟೆಯಿಂದ ಸಂಜೆ 6 ಗಂಟೆಯ ತನಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Write A Comment