ಮನೋರಂಜನೆ

‘ಕೃಷ್ಣ-ರುಕ್ಕು’: ಅಜಯ್ ರಾವ್ ಗೆ ರುಕ್ಮಿಣಿ ಸಾಥ್

Pinterest LinkedIn Tumblr

KRISHNA RUKKU

‘ಕೃಷ್ಣ’ ಸರಣಿಯಿಂದ ಗೆಲುವಿನ ರುಚಿ ಕಾಣುತ್ತಿರುವ ಅಜಯ್ ರಾವ್ ಪ್ರಸ್ತುತ ರುಕ್ಮಿಣಿಯ ಜೊತೆಯಾಗಿದ್ದಾರೆ. ರುಕ್ಮಿಣಿಯಾಗಿ ಸಾಥ್ ಕೊಟ್ಟಿದ್ದಾರೆ ಅಮೂಲ್ಯ. ‘ಕೃಷ್ಣ–ರುಕ್ಕು’ ಚಿತ್ರದ ಹಾಡುಗಳ ಅನಾವರಣದ ಸಂಭ್ರಮಕ್ಕೆ ಚಿತ್ರತಂಡವನ್ನು ಮಾಧ್ಯಮದೆದುರು ಕರೆತಂದಿದ್ದರು ನಿರ್ದೇಶಕ ಅನಿಲ್ ಕುಮಾರ್.

‘ಕೃಷ್ಣ’ ಸರಣಿಯ ಎಲ್ಲ ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ಶ್ರೀಧರ್ ವಿ. ಸಂಭ್ರಮ್ ಈ ಚಿತ್ರಕ್ಕೂ ಐದು ಹಾಡುಗಳಿಗೆ ರಾಗ ಜೋಡಿಸಿದ್ದಾರೆ. ಜಯಂತ ಕಾಯ್ಕಿಣಿ ಬರೆದ, ಸೋನು ನಿಗಮ್ ಮತ್ತು ಶ್ರೇಯಾ ಘೋಷಾಲ್ ಹಾಡಿದ ಸೂಫಿ ಶೈಲಿಯ ‘ಹೇಳಿಲ್ಲ ಯಾರಲ್ಲು ನಾನು’ ಹಾಡು ಆಲ್ಬಂನ ಮುಖ್ಯ ಆಕರ್ಷಣೆ ಎನ್ನುತ್ತದೆ ತಂಡ. ಉಳಿದಂತೆ ಅನಿಲ್ ಕುಮಾರ್, ಆನಂದ ಪ್ರಿಯ ಮತ್ತು ಶ್ರೀಧರ್ ವಿ. ಸಂಭ್ರಮ್ ಗೀತರಚನೆ ಮಾಡಿದ್ದಾರೆ. ಪುನೀತ್ ರಾಜಕುಮಾರ್, ಶ್ವೇತಾ ಪ್ರಭು, ಕಾರ್ತಿಕ್, ಅನುರಾಧಾ ಭಟ್, ಶಶಾಂಕ್ ಶೇಷಗಿರಿ, ಸಂಗೀತಾ ಹಾಡಿದ್ದಾರೆ.

‘ಮಲೆನಾಡಿನಲ್ಲಿ ನಡೆಯುವ ಕಥೆಯಲ್ಲಿ ಮಡಿಕೇರಿಯನ್ನು ಛಾಯಾಗ್ರಾಹಕ ಜಗದೀಶ್ ವಾಲಿ ಅದ್ಭುತವಾಗಿ ತೋರಿಸಿದ್ದಾರೆ’ ಎಂದರು ನಿರ್ದೇಶಕ ಅನಿಲ್ ಕುಮಾರ್. ಪ್ರತಿ ಮನೆಯಲ್ಲೂ ನಡೆಯುವ ಕಥೆಯನ್ನೇ ಚಿತ್ರಕ್ಕೆ ಅಳವಡಿಸಿದ್ದಾಗಿ ಅವರು ಹೇಳುತ್ತಾರೆ. ಉಡಾಫೆ ಹುಡುಗನೊಬ್ಬ ಇಡೀ ಊರನ್ನೇ ರಕ್ಷಿಸುವ ಪಾತ್ರದಲ್ಲಿ ಅಜಯ್ ರಾವ್ ನಟಿಸಿದ್ದಾರೆ.

ಅಮೂಲ್ಯ ಜೊತೆ ಕೆಮೆಸ್ಟ್ರಿ ಚೆನ್ನಾಗಿತ್ತು ಎಂದ ಅಜಯ್ ರಾವ್, ‘ಕೃಷ್ಣ’ ಸರಣಿಯ ಈ ಮೊದಲಿನ ಸಿನಿಮಾಗಳಂತೆ ಪ್ರಸಕ್ತ ಚಿತ್ರವೂ ಯಶಸ್ವಿಯಾಗುವ ಭರವಸೆಯಲ್ಲಿದ್ದಾರೆ. ಅಮೂಲ್ಯ ಈ ಚಿತ್ರದಲ್ಲೂ ಬಜಾರಿ ಪಾತ್ರದಲ್ಲೇ ಕಾಣಿಸಿಕೊಂಡಿದ್ದರೂ ಸಾಂಪ್ರದಾಯಿಕ ಹುಡುಗಿಯಂತೆ. ‘ಶ್ರಾವಣಿ ಸುಬ್ರಮಣ್ಯ’ ನಂತರ ಮತ್ತೊಮ್ಮೆ ಶೀರ್ಷಿಕೆಯಲ್ಲಿ ನಾಯಕಿಯನ್ನೂ ಪ್ರತಿನಿಧಿಸುವ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಖಷಿ ಅವರಿಗೆ.

ನಟ ಶ್ರೀಮುರುಳಿ ಹಾಡುಗಳ ಸೀಡಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ಆನಂದ್ ಆಡಿಯೊ ಸಂಸ್ಥೆ ಈ ಚಿತ್ರದ ಹಾಡುಗಳ ವಿತರಣೆ ಜವಾಬ್ದಾರಿ ಹೊತ್ತಿದೆ. ಜನವರಿಯಲ್ಲಿ ಚಿತ್ರವನ್ನು ಪ್ರೇಕ್ಷಕರ ಮುಂದಿಡಲು ತಯಾರಾಗುತ್ತಿದ್ದಾರೆ ನಿರ್ಮಾಪಕ ಉದಯ್ ಕೆ. ಮೆಹ್ತಾ.

Write A Comment