* ಯೋಗೀಶ್ ಕುಂಭಾಸಿ
ಕುಂದಾಪುರ: ಒಂದೆಡೆ ಹೊರಗಡೆಯಲ್ಲಿ ಎಡಬಿಡದೇ ಸುರಿಯುತ್ತಿದ್ದ ಮಳೆ. ಇನ್ನೊಂದೆಡೆ ಸಾವಿರಾರು ಜನರ ಕಣ್ಣುಗಳಲ್ಲಿ ಸುರಿಯುತ್ತಿರುವ ಕಣ್ಣಿರ ಧಾರೆ. ಎಂತವರ ಹೃದಯವೇ ಕಿತ್ತು ಬರುವಂತಹ ಸನ್ನಿವೇಶ, ತಮ್ಮ ಮಕ್ಕಳು, ಮನೆಮಕ್ಕಳನ್ನು ಕಡೆದುಕೊಂದ ದುಖಃದ ನಡುವೆಯೇ ಅವರ ಗತ ನೆನಪನ್ನು ಮೆಲುಕಿಸಿ ಬಿಕ್ಕಿಬಿಕ್ಕಿ ಅಳುವ ಪೋಷಕರು, ಇನ್ನೆಂದೂ ಈ ಮಕ್ಕಳ ಮುಖ ನೋಡೆವು ಎನ್ನುವ ದುಃಖದಲ್ಲಿಯೇ ತಮ್ಮ ಮಕ್ಕಳನ್ನು ಕೊನೆಯ ಬಾರೀ ನೋಡುತ್ತಾ ಚೀರಾಡಿದ ತಂದೆ ತಾಯಂದಿರು.
ಗುರುವಾರ ತ್ರಾಸಿ, ಮುಳ್ಳಿಕಟ್ಟೆ, ಗುಜ್ಜಾಡಿಯಲ್ಲಿ ಜನರು ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳ ಮುಚ್ಚಿ ಸಂತಾಪ ಸೂಚಿಸಿದರು. ತಲ್ಲೂರಿನಲ್ಲಿ ಮಧ್ಯಾಹ್ನದ ಬಳಿಕ ಎಲ್ಲಾ ಅಂಗಡಿಗಳು ಮುಚ್ಚಿ ಸ್ವಯಂಪ್ರೇರಿತ ಬಂದ್ ನಡೆಸಿದರು.
ಗಂಗೊಳ್ಳಿ ವರದಿ:
ಗಂಗೊಳ್ಳಿ ಇಗರ್ಜಿಯಲ್ಲಿ ಐದು ಮಕ್ಕಳ ಅಂತ್ಯಕ್ರಿಯೆ…
ಗುರುವಾರ ಗಂಗೊಳ್ಳಿ ಹಾಗೂ ತಲ್ಲೂರು ಚರ್ಚ್ ವಠಾರದಲ್ಲಿ ನಡೆದ ಹೃದಯವಿದ್ರಾವಕ ಘಟನೆಗಳಿವು. ಜಾತಿ ಧರ್ಮ ಮತ ಭೇದವಿಲ್ಲದೆ ನೆರೆದ ಸಾವಿರಾರು ಜನರ ಪ್ರಾರ್ಥನೆಯೊಂದೇ ಆಗಿತ್ತು. ಅದುವೇ ಇಂಥಹ ದುರಂತ ಇನ್ನೆಂದು ಮರುಕಳಿಸದಿರಲಿ ಎನ್ನುವ ಪ್ರಾರ್ಥನೆ. ಮಕ್ಕಳ ಆತ್ಮಗಳಿಗೆ ಚಿರಶಾಂತಿ ಲಭಿಸಲಿ ಎನ್ನುವ ಶೃದ್ದಾಂಜಲಿಯ ಶೋಕಗೀತೆ. ದುಃಖ, ನೋವು, ಬಿಕ್ಕಳಿಕೆಯ ಪರಕಾಷ್ಠೆ ಗಂಗೊಳ್ಳಿಯ ಇಮ್ಯಾಕುಲೆಟ್ ಕನ್ಸೆಕ್ಸನ್ ಇಗರ್ಜಿ ಹಾಗೂ ತಲ್ಲೂರು ಸಂತ ಫ್ರಾನ್ಸಿಸ್ ಅಸೀಸ್ ಚರ್ಚ್ ವಠಾರದಲ್ಲಿ ಕಂಡುಬಂದಿತ್ತು.
ಜೂ.21 ರಂದು ತ್ರಾಸಿಯ ಮೊವತ್ತುಮುಡಿಯಲ್ಲಿ ಸಂಭವಿಸಿದ ಭೀಕರ ರಸ್ತೆ ದುರಂತದಲ್ಲಿ ಇಹಲೋಕ ತ್ಯಜಿಸಿದ ಮುವತ್ತು ಮುಡಿ ನಿವಾಸಿ ಪ್ರಸ್ತುತ ದುಬೈಯಲ್ಲಿ ಉದ್ಯೋಗಿಯಾಗಿರುವ ಸ್ಟೀವನ್ ಹಾಗೂ ಪತ್ನಿ ರೀಟಾ ಒಲಿವೆರಾ ಎಂಬುವರ ಮಕ್ಕಳಾದ ಕೆಲಿಸ್ಟಾ ಹಾಗೂ ಕ್ಲೆರಿಸ್ಸಾ , ಅಲ್ವಿನ್ ಹಾಗೂ ರೇಷ್ಮಾ ಒಲಿವೆರಾ ಅವರ ಮಕ್ಕಳಾದ ಅನ್ಸಿಟಾ ಹಾಗೂ ಅಲ್ವಿಟಾ, ಗಂಗೊಳ್ಳಿಯ ವಿನೋದ್ ಡಯಾಸ್ ಮತ್ತು ಡೆಸ್ನಿ ಡಯಾಸ್ ಅವರ ಪುತ್ರ ಡೆಲ್ವಿನ್ ಡಯಾಸ್ ಅವರ ಅಂತ್ಯ ಸಂಸ್ಕಾರ ಜೂನ್ 23ರಂದು ಅಪರಾಹ್ನ ನಡೆಯಿತು.
ಮೃತ ಕಂದಮ್ಮಗಳ ಕಳೆಬರಹವನ್ನು ಅವರವರ ಮನೆಯಿಂದ ಮೆರವಣಿಗೆಯ ಮೂಲಕ ಮುಳ್ಳಿಕಟ್ಟೆ, ತ್ರಾಸಿ, ಗುಜ್ಜಾಡಿ ಮಾರ್ಗವಾಗಿ ಸುಮಾರು ೧೨ ಗಂಟೆಯ ಸುಮಾರಿಗೆ ಇಗರ್ಜಿಯ ಆವರಣಕ್ಕೆ ತರಲಾಯಿತು. ಶವಯಾತ್ರೆಯ ಸಂದರ್ಭ ರಸ್ತೆಯುದ್ದಕ್ಕೂ ಅಶ್ರುಧಾರೆಯನ್ನು ಒರೆಸಿಕೊಳ್ಳುತ್ತಾ ನಿಂತಿದ್ದ ನೂರಾರು ಜನ ಅಂತಿಮ ದರ್ಶನ ಪಡೆದು ಪುಷ್ಪ ಸಮರ್ಪಿಸಿ ಶೃದ್ದಾಂಜಲಿ ಕೋರಿದರು. ೧೨ ಗಂಟೆಯ ಸುಮಾರಿಗೆ ಎಲ್ಲಾ ಐದು ಮೃತದೇಹಗಳನ್ನು ಇಗರ್ಜಿಯ ಆವರಣಕ್ಕೆ ತರಲಾಯಿತು. ಅಲ್ಲಿ ಬಿಷಪ್ ಜೇರಾಲ್ಡ್ ಐಸಾಕ್ ಲೋಬೊ ಬಲಿಪೂಜೆ ನೆರವೇರಿಸಿದರು. ಚರ್ಚ್ನ ಧರ್ಮಗುರುಗಳು, ಹಾಗೂ ಚರ್ಚ್ನ ಉಪಾಧ್ಯಕ್ಷರಾದ ಜೇರಾಲ್ಡ್ ಕ್ರಾಸ್ತಾ ಶೃದ್ದಾಂಜಲಿ ಕೋರಿದರು.
ಒಂದೇ ಗುಂಡಿಯಲ್ಲಿ ಐದು ಮಕ್ಕಳ ಮೃತದೇಹ…
ಕುಂದಾಪುರ ಚರ್ಚ್ನ ಧರ್ಮಗುರು ಪಾ|ಅನಿಲ್ ಡಿಸೋಜ ಪ್ರವಚನ ನೀಡಿದರು. ಒಂದುವರೆ ಗಂಟೆಯ ಕಾಲ ಕ್ರೈಸ್ತ ಧರ್ಮದಂತೆ ಧಾರ್ಮಿಕ ವಿಧಿವಿಧಾನಗಳು ನಡೆದವು. ಸುಮಾರು ೫ ಸಾವಿರಕ್ಕೂ ಹೆಚ್ಚು ಜನ ಈ ಸಂದರ್ಭ ಚರ್ಚ್ ಆವರಣದಲ್ಲಿ ಹಾಜರಿದ್ದು ಕಂಬನಿ ಮಿಡಿದರು ಅಂತಿಮ ವಿಧಿವಿಧಾನದ ಬಳಿಕ ಐದು ಮಕ್ಕಳ ದೇಹವನ್ನು ಒಂದೇ ಗುಂಡಿಯಲ್ಲಿ ಸಂಸ್ಕಾರ ಮಾಡಲಾಯಿತು. ಈ ಸಂದರ್ಭ ಮೃತ ಮಕ್ಕಳ ಕುಟುಂಬದವರ ರೋಧನ ಮುಗಿಲು ಮುಟ್ಟಿತ್ತು. ಇಗರ್ಜಿಯ ವಠಾರದಲ್ಲಿಯೇ ಅಳುವಿನ ಆರ್ತದನಿಯೇ ಕೇಳಿಬಂತು. ಭಗವಂತ ನಿನ್ನ ಮಕ್ಕಳನ್ನು ನಿನ್ನ ಪಾದಕ್ಕೆ ಸೇರಿಸಿದ್ದೇವೆ ಎನ್ನುವ ನೋವು ತುಂಬಿದ ಪ್ರಾರ್ಥನೆಗೆ ಇಡೀ ಜನಸ್ತೋಮ ಸಾಕ್ಷಿಯಾಗಿತ್ತು.
ತಲ್ಲೂರಿನಲ್ಲಿ ಮೂರು ಮಕ್ಕಳ ಅಂತ್ಯಕ್ರಿಯೆ:
ಅಪಘಾತದಲ್ಲಿ ಬಲಿಯಾದ ಕಟ್ಬೇಲ್ತೂರಿನ ಲಾಯ್ಡ್ ಡಿಸಿಲ್ವಾ ಅವರ ಇಬ್ಬರು ಪುತ್ರಿಯರಾದ ನಿಖಿತ, ಅನನ್ಯ ಹಾಗೂ ಹೆಮ್ಮಾಡಿಯ ವಿನೋದ ಲೋಬೋ ಅವರ ಪುತ್ರ ರೋಯ್ಸ್ಟನ್ ಅವರ ಮೃತ ಶರೀರದ ಅಂತ್ಯವಿಧಿಗಳನ್ನು ಗುರುವಾರ ಸಂಜೆ ತಲ್ಲೂರಿನ ಇಗರ್ಜಿಯಲ್ಲಿ ನಡೆಸಿದ ಬಳಿಕ ದಫನ ಮಾಡಲಾಯಿತು.
ಉಡುಪಿ ರೋಮನ್ ಕೆಥೋಲಿಕ್ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೋ ಧಾರ್ಮಿಕ ವಿಧಿಯನ್ನು ನೆರವೇರಿಸಿದರು. ಕುಂದಾಪುರ ವಲಯ ಧರ್ಮಗುರುಗಳಾದ ಅನಿಲ್ ಡಿಸೋಜಾ, ತಲ್ಲೂರು ಇಗರ್ಜಿಯ ಧರ್ಮಗುರು ಜಾನ್ ವಾಲ್ಟರ್ ಮೆಂಡೋನ್ಸ್ ಸೇರಿದಂತೆ ಪರಿಸರದ ವಿವಿಧ ಇಗರ್ಜಿಗಳಿಂದ ಆಗಮಿಸಿದ್ದ ಧರ್ಮಗುರುಗಳು ಅಂತಿಮ ವಿಧಿಯಲ್ಲಿ ಸಹಕಾರ ನೀಡಿದರು. ಇಗರ್ಜಿಯ ಒಳ ಭಾಗದಲ್ಲಿನ ಧಾರ್ಮಿಕ ವಿಧಿ ಮುಗಿದ ಬಳಿಕ ಸಾರ್ವಜನಿಕರಿಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಗಣ್ಯರ ಭೇಟಿ, ಅಂತಿಮನಮನ…
ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ, ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯೆ ಡಾ. ವನಿತಾ ತೊರವಿ, ಡಿವೈಎಸ್ಪಿ ಎಂ.ಮಂಜುನಾಥ ಶೆಟ್ಟಿ, ಜಿಲ್ಲಾ ಗ್ರಹ ರಕ್ಷಕ ದಳ ಸೆಕಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ, ಪಾರ್ಥಿವ ಶರೀರಕ್ಕೆ ಅಂತಿಮ ಗೌರವ ಸಲ್ಲಿಸಿದರು. ತಾ.ಪಂ ಸದಸ್ಯ ಎಚ್.ರಾಜು ದೇವಾಡಿಗ, ಸರ್ಕಲ್ ಇನ್ಸ್ಪೆಕ್ಟರ್ ದಿವಾಕರ ಪಿ.ಎಂ, ಉಪನಿರೀಕ್ಷಕರುಗಳಾದ ನಾಸೀರ್ ಹುಸೇನ್, ಸುನೀಲ್ಕುಮಾರ, ವಿವಿಧ ಚರ್ಚ್ನ ಧರ್ಮಗುರುಗಳು, ಕುಂದಾಪುರ ತಾಲೂಕಿನ ವಿವಿಧ ಜನಪ್ರತಿನಿಧಿಗಳು ಹಾಜರಿದ್ದರು.
ಕ್ರೈಸ್ತಧರ್ಮದವರು ಮಾತ್ರವಲ್ಲದೇ ಬೇರೆ ಧರ್ಮದ ಜನರು ಕೂಡಾ ಪಾಲ್ಗೊಂಡು ಕಂಬನಿ ಮಿಡಿದರು. ಅಲ್ಲಿ ಧರ್ಮ, ಜಾತಿ, ಭಾಷೆ, ಅಂತಸ್ತು ಕಂಡು ಬರಲಿಲ್ಲ. ದೇವರ ಪಾದ ಸೇರಿದ ಮಕ್ಕಳಿಗೆ ಅಂತಕರಣ ತುಂಬಿದ ಬಾಷ್ಪಂಜಲಿ ಮಾತ್ರ ಕಂಡು ಬರುತ್ತಿತ್ತು. ಎಲ್ಲರಲ್ಲೂ ಭಾರವಾದ ಹೃದಯ, ಇನ್ನೊಮ್ಮೆ ಹುಟ್ಟಿ ಬನ್ನಿ ಮಕ್ಕಳೆ ಎನ್ನುವ ಆಶಯವೇ ತುಂಬಿತ್ತು.
ಇದನ್ನೂ ಓದಿರಿ:
ತ್ರಾಸಿ: ಅಪಘಾತದಲ್ಲಿ 8 ಮಕ್ಕಳ ಸಾವು; ಶೋಕಸಾಗರದಲ್ಲಿ ಜನತೆ; ಹೆಮ್ಮಾಡಿ ಬಂದ್; ಶಾಲಾ ಕಾಲೇಜು ರಜೆ
ಕುಂದಾಪುರದ ತ್ರಾಸಿಯಲ್ಲಿ ಎಂಟು ಮಕ್ಕಳನ್ನು ಬಲಿಪಡೆದ ಕರಾಳ ಮಂಗಳವಾರ: ಈ ಸಾವಿಗ್ಯಾರು ಹೊಣೆ?
http://kannadigaworld.com/kannada/karavali-kn/266192.html
ತ್ರಾಸಿ ದುರ್ಘಟನೆ ಸಂದರ್ಭ ಸಾಮಾಜಿಕ ಜಾಲತಾಣಗಳ ದುರುಪಯೋಗ; ಸೈಬರ್ ಕ್ರೈಮ್ ವಿಭಾಗಕ್ಕೆ ದೂರು
ಫೇಸ್ಬುಕ್ನಲ್ಲಿ ಕ್ರೈಸ್ತ ಸಮುದಾಯದವರ ಬಗ್ಗೆ ಅವಹೇಳನಕಾರಿ ಕಮೆಂಟ್ ಪೋಸ್ಟ್ : ಆರೋಪಿಯ ಬಂಧನಕ್ಕೆ ಆಗ್ರಹ
Comments are closed.