ಉಡುಪಿ: ‘ಛೇ ತಾಯಿಯ ಚಿನ್ನ ಕದ್ದೋರು ಒಳ್ಳೆದಾಗುತ್ತಾರೆಯೇ?, ಇಷ್ಟು ದಿನ ಆ ತಾಯಿ ಅವರನ್ನು ಸುಮ್ನೆ ಬಿಟ್ಟಿದ್ಯಾಕೆ? ತಾಯಿಯ ಬಂಗಾರ ಕದಿಯಲು ಎಷ್ಟು ಧೈರ್ಯ ಬೇಕು?’- ಕೊಲ್ಲೂರಿನ ಎಲ್ಲಿ ಹೋದ್ರೂ ಇದೇ ವಿಚಾರ, ಅದೇ ಸುದ್ದಿ..
ಕೊಲ್ಲೂರು ಶ್ರೀ ಮೂಕಾಂಬಿಕೆಯ ಸನ್ನಿಧಿಯಲ್ಲಿ ಹಗರಣಗಳು, ಅಪಸ್ವರದ ಮಾತುಗಳು, ಕಿರಿಕ್ ಸಂಗತಿಗಳು ಇದೇನೂ ಹೊಸತಲ್ಲ. ಆದರೇ ಮೂಕಾಂಬಿಕೆಯ ಭಕ್ತರಿಗೆ ಈ ಪರಿ ಶಾಕ್ ನೀಡಿದ ಬಹುದೊಡ್ಡ ಸಂಗತಿ ಇದು. ದೇವಸ್ಥಾನದ ‘ಡಿ’ ಗ್ರೂಫ್ ನೌಕರ ಶಿವರಾಮ ಮಡಿವಾಳ ಎಂಬಾತ ಆ ತಾಯಿಯ 2.5 ಕೆ.ಜಿ. ಚಿನ್ನಕ್ಕೆ ಕನ್ನ ಹಾಕಿದ್ದಾನೆ. ಈತನ ಈ ಮನೆಹಾಳು ಕಾರ್ಯಕ್ಕೆ ದೇವಳದ ಕಂಪ್ಯೂಟರ್ ಆಪರೇಟರ್ ಗಂಗಾಧರ ಹೆಗ್ಡೆ, ಇನ್ನೋರ್ವ ನೌಕರ ಪ್ರಸಾದ ಆಚಾರ್ ಹಾಗೂ ಮಾಜಿ ಸಿಬ್ಬಂದಿಗಳಾದ ನಾಗರಾಜ ಖಾರ್ವಿ, ಗಣೇಶ್ ಪೂಜಾರಿ ನೇರಾನೇರ ಸಪೋರ್ಟ್ ಮಾಡಿದ್ದಾರೆ. ಉಳಿದಂತೆ 18 ಜನರು ಈ ಕ್ರತ್ಯದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಶಾಮೀಲಾಗಿದ್ದಾರೆ ಎನ್ನುವ ಬಹುದೊಡ್ಡ ಸುದ್ದಿ ಭಕ್ತರನ್ನು ದಿಗ್ಭ್ರಾಂತರನ್ನಾಗಿಸಿದೆ.
(ಆರೋಪಿ ಕೆಲಸ ಮಾಡುತ್ತಿದ್ದ ಕೌಂಟರ್ ನಂ.1)
(ಆರೋಪಿಗಳಿಂದ ವಶಪಡಿಸಿಕೊಂಡ ಚಿನ್ನ)
(ಬಂಧಿತ ಆರೋಪಿಗಳು)
ದೇವಳದ ಅಧಿಕಾರಿಗಳಿಗೂ ತನಿಖೆ ಉರುಳು!
ಪ್ರಕರಣದಲ್ಲಿ ದೇವಳದ ಮಾಜಿ ಕಾರ್ಯನಿರ್ವಹಣಾಧಿಕಾರಿ ಎಲ್.ಎಸ್. ಮಾರುತಿ, ಪ್ರಸನ್ನ ಹೆಸರು ಬಲವಾಗಿ ಕೇಳಿಬರುತ್ತಿದೆ. ಅಲ್ಲದೇ ನಾಲ್ಕು ತಿಂಗಳ ಹಿಂದಷ್ಟೇ ಹೊಸದಾಗಿ ಬಂದ ಕಾರ್ಯನಿರ್ವಹಣಾಧಿಕಾರಿ ಉಮಾ ಅವರನ್ನು ಈಗಾಗಲೇ ತನಿಖೆ ಮಾಡಲಾಗಿದೆ. ಇನ್ನು ದೇವಳದ ಉಪಕಾರ್ಯನಿರ್ವಹಣಾಧಿಕಾರಿ ಕ್ರಷ್ಣಮೂರ್ತಿ, ದೇವಳದ ಅಧೀಕ್ಷಕರು, ಇಬ್ಬರು ಇಂಜಿನಿಯರುಗಳು ಹಾಗೂ ಕೆಲವು ಶಂಕಿತ ನೌಕರರನ್ನು ಬಲವಾಗಿ ವಿಚಾರಣೆ ನಡೆಸಿದ್ದು ಈಗಾಗಲೇ ಹಲವು ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಇನ್ನು ಮಾಜಿ ಕಾರ್ಯನಿರ್ವಹಣಾಧಿಕಾರಿಗಳಿಬ್ಬರು ಈ ಅವ್ಯವಹಾರ ತಿಳಿದು ಕೂಡ ಜಾಣ ಕುರುಡು ಪ್ರದರ್ಶಿಸಿ ದೇವಿ ಚಿನ್ನವನ್ನು ಕನ್ನ ಹಾಕುವ ಕ್ರತ್ಯಕ್ಕೆ ಸಪೋರ್ಟ್ ಮಾಡಿದ್ದಾರೆಯೇ?ಎನ್ನುವ ಅನುಮಾನಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ಏನು ಹಾಳ್ತಾರೇ ಮಾಜಿ ಇ.ಓ. ಸಾಹೆಬ್ರು?
ನನ್ನ ಕಾಲದಲ್ಲಿ ಮಾತ್ರವಲ್ಲ…ನನ್ನ ರೀತಿಯೇ ಇನ್ನಿಬ್ಬರ ಕಾಲದಲ್ಲಿಯೂ ಈ ಸಮಸ್ಯೆ ನಡೆದಿದೆ. ನನ್ನದೂ ಮಾತ್ರ ತಪ್ಪಲ್ಲ. ಪೊಲೀಸರು ನನ್ನನ್ನೂ ತನಿಖೆ ಮಾಡಿದ್ದಾರೆ.- ಎನ್ನುತ್ತಾ ತನಗೂ ಈ ಹಗರಣಕ್ಕೂ ಯಾವ ಸಂಬಂಧವಿಲ್ಲ, ನನಗೆ ಕ್ಯಾರೇ ಇಲ್ಲವೆಂಬಂತೆ ಮಾತನಾಡಿದ್ದು ದೇವಳದ ಮಾಜಿ ಕಾರ್ಯನಿರ್ವಹಣಾಧಿಕಾರಿ ಎಲ್.ಎಸ್. ಮಾರುತಿ. ಬುಧವಾರ ಬೆಳಿಗ್ಗೆ ದೇವಸ್ಥಾನದಲ್ಲಿ ‘ಕನ್ನಡಿಗ ವರ್ಲ್ಡ್’ ಜೊತೆ ಮಾತಿಗೆ ಸಿಕ್ಕ ಅವರು ಈ ಪ್ರತಿಕ್ರಿಯೆ ನೀಡಿದರು.
ಇನ್ನೂ ಇದ್ದಾರೇ ಹೆಗ್ಗಣಗಳು..
ದೇವಸ್ಥಾನದಲ್ಲಿ ಇದೇನೂ ಹೊಸತಲ್ಲ ಸ್ವಾಮೀ. ಇನ್ನೂ ದೇವಳದಲ್ಲಿ ನುಂಗಿ ನೀರು ಕುಡಿಯುವ ಹಲವು ಹೆಗ್ಗಣಗಳಿದೆ. ಅವರುಗಳನ್ನು ಬಂಧಿಸಿ ಬಿಲ ಖಾಲಿ ಮಾಡಿಸಿದ್ರೇ ಮಾತ್ರ ಇಲ್ಲಿ ಒಳಿತು ಸಾಧ್ಯ. ಇನ್ನು ಅರೆಸ್ಟ್ ಆದವರು ಕೆಲವೇ ಸಮಯದಲ್ಲಿ ಜಾಮೀನಿನಲ್ಲಿ ಹೊರಬರುತ್ತಾರೆ. ಆದರೇ ಯಾವ ಕಾರಣಕ್ಕೂ ಅಂತಹ ಕಳ್ಳರನ್ನು ಪುನಃ ದೇವಸ್ಥಾನದ ಒಳಗೆ ಸೇರಿಸಿ, ಕೆಲಸ ನೀಡಕೂಡದು. ಒಂದೊಮ್ಮೆ ಅಂತವರಿಗೆ ಅವಕಾಶ ಕೊಟ್ಟರೇ ನಾಳೆ ದೇವಸ್ಥಾನವನ್ನೇ ಯಾರಿಗಾದರೂ ಮಾರುತ್ತಾರೆ ಎಂದು ಭಕ್ತರೋರ್ವರು ತಮ್ಮ ಅಭಿಪ್ರಾಯ ಹೇಳಿಕೊಂಡರು.
ಭಕ್ತರ ದುಡ್ಡು,ಚಿನ್ನ ಭೋಗಕ್ಕೆ..!
ಇನ್ನು ದೇವಸ್ಥಾನದಲ್ಲಿ ಕೆಲಸ ಮಾಡಿಕೊಂಡು ಬಿಂದಾಸ್ ಲೈಫ್ ಸ್ಟೈಲ್ ಹೊಂದಿದ್ದ ಬಂಧಿತ ಆರೋಪಿಗಳೆಲ್ಲರೂ ಕದಿಯುವ ಹಣದಲ್ಲಿ ಮಧ್ಯಪಾನ, ಜೂಜು, ಜುಗಾರಿ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದರು. ಹಲವು ವರ್ಷ ನಯವಂಚಕ ಮುಖವಾಡದಲ್ಲಿ ಒಳಗೆ ಕೆಲಸ ಮಾಡಿದ್ದ ಅವರು ಲೆಕ್ಕಕ್ಕೆ ಸಿಗದ ಇನ್ನೆಷ್ಟು ಬೆಲೆಬಾಳುವ ವಸ್ತು, ನಗದು ಕದ್ದಿದ್ದರೋ ಆ ‘ಮೂಕಾಂಬಿಕೆ ತಾಯಿ’ಗೆ ಗೊತ್ತು.
ರಾಜ್ಯ ಹಾಗೂ ಹೊರರಾಜ್ಯಗಳ ಕೋಟ್ಯಾನುಕೋಟಿ ಭಕ್ತಸಮೂಹ ಹೊಂದಿದ ಮೂಕಾಂಬಿಕೆ ತಾಯಿ ಈ ಎಲ್ಲಾ ಹಗರಣ, ಅವ್ಯವಹಾರವನ್ನೂ ನೋಡಿಯೂ ಸುಮ್ಮನಿದ್ದಾಳೆ. ಅವಳೊಮ್ಮೆ ಮುನಿದರೇ ಊರಿಗೆ ಒಳಿತಲ್ಲ. ತಾಯಿ ಮೂಕಾಂಬಿಕೆ ದೇವಸ್ಥಾನದಲ್ಲಿರುವ ನಂಬಿಕೆ ದ್ರೋಹಿಗಳನ್ನು, ವಂಚಕರನ್ನು ಪೊಲೀಸರು ನಿಸ್ಪಕ್ಷಪಾತ ತನಿಖೆ ಮೂಲಕ ಬಂಧಿಸಿ ಸಹಸ್ರಾರು ಜನರ ಭಾವನೆಗಳಿಗೆ ಬೆಲೆನೀಡಬೇಕಿದೆ ಎಂದು ಊರಿನ ಹಿರಿಯ ನಾಗರೀಕರೊಬ್ಬರು ಅಭಿಪ್ರಾಯಪಟ್ಟರು.
ವರದಿ- ಯೋಗೀಶ್ ಕುಂಭಾಸಿ
ಇದನ್ನೂ ಓದಿರಿ-
ಕೊಲ್ಲೂರು ಮೂಕಾಂಬಿಕೆ ಚಿನ್ನ; ಗುಮಾಸ್ತ ಇಟ್ಟಿದ್ದ ಅಡಮಾನ; ಹಣದಲ್ಲಿ ಸ್ನೇಹಿತರೊಂದಿಗೆ ನಿತ್ಯ ಮಾಡ್ತಿದ್ದ ಮಧ್ಯಪಾನ!
ಕೊಲ್ಲೂರು ಮೂಕಾಂಬಿಕೆಯ 30 ಲಕ್ಷಕ್ಕೂ ಅಧಿಕ ಚಿನ್ನಕ್ಕೆ ಕನ್ನ ಹಾಕಿದ ಗುಮಾಸ್ತ; ಆತನ ಹಿಂದೆ ಯಾರಿದ್ದಾರೆ?
ಕೊಲ್ಲೂರು ಮೂಕಾಂಬಿಕೆ ಚಿನ್ನಕ್ಕೆ ಕನ್ನ ಹಾಕಿ ಪರಾರಿಯಾದ ದೇವಳದ ಸಿಬ್ಬಂದಿ..!?